ADVERTISEMENT

ಹುಬ್ಬಳ್ಳಿ: ಪತ್ನಿ ಕೊಂದ ಪತಿ; ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 3:19 IST
Last Updated 12 ಜುಲೈ 2021, 3:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ನಡತೆ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ಪತಿ, ಪತ್ನಿಯನ್ನು ಹತ್ಯೆಗೈದ ಘಟನೆ ಭಾನುವಾರ ತಾಲ್ಲೂಕಿನ ಕುಸಗಲ್‌ ಗ್ರಾಮದಲ್ಲಿ ನಡೆದಿದೆ.

ಆರೋಪಿ ಪತಿ ಸೈಫ್‌ಅಲಿ ಈಟಿ ಎಂಬಾತನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಹರುನ್ನಿಸಾ ಹತ್ಯೆಯಾದ ಮಹಿಳೆ.

ಮೂಲತಃ ಗದುಗಿನವರಾದ ದಂಪತಿ ಕೂಲಿ ಕೆಲಸಕ್ಕಾಗಿ ಎರಡು ವರ್ಷಗಳ ಹಿಂದೆ ಕುಸಗಲ್‌ ಗ್ರಾಮಕ್ಕೆ ಬಂದು ನೆಲೆಸಿದ್ದರು. ಸೈಫ್‌ಅಲಿ ಪತ್ನಿಯ ನಡತೆ ಕುರಿತು ಆಗಾಗ ಸಂಶಯ ವ್ಯಕ್ತಪಡಿಸುತ್ತಿದ್ದ. ಪತ್ನಿ ಯಾರ ಜೊತೆಯಾದರೂ ಮಾತನಾಡಿದರೆ ಅಸಭ್ಯವಾಗಿ ಬೈದು, ಹಲ್ಲೆ ಮಾಡುತ್ತಿದ್ದ. ಭಾನುವಾರವೂ ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಕೋಪಗೊಂಡ ಪತಿ, ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಜೋರಾಗಿ ಕೂಗುತ್ತಿರುವುದನ್ನು ಕೇಳಿ ಅಕ್ಕಪಕ್ಕದವರು ಬಂದು ಕಿಮ್ಸ್‌ಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿದೆ ಮೆಹರುನ್ನಿಸಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮಾರಕಾಸ್ತ್ರಗಳಿಂದ ಹಲ್ಲೆ; ಹತ್ಯೆ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಭಾನುವಾರ ಗೋಪನಕೊಪ್ಪದಲ್ಲಿ ಸ್ಥಳೀಯ ನಿವಾಸಿ ಅಭಿಷೇಕ ಪಾಟೀಲ(21) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಅಭಿಷೇಕ ಅವರ ಮನೆಯ ಎದುರಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ತಲೆ, ಭುಜ, ಹೊಟ್ಟೆಗೆ ಹರಿತವಾದ ಆಯುಧ ಇರಿದು ಹತ್ಯೆ ಮಾಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಜೊತೆ ಹಳೆ ವೈಷಮ್ಯ ಹೊಂದಿದ್ದ ಕೆಲವರು ಹಲ್ಲೆ ನಡೆಸಿರಬಹುದು. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಕೆ. ರಾಮರಾಜನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.