ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರಕಲೆ, ಗುಡಿ ಕೈಗಾರಿಕೆ, ಮಣ್ಣಿನ ಮೂರ್ತಿ ತಯಾರಿಕೆಯ ಕುಲಕಸುಬು ಮಾಡಿಕೊಂಡಿರುವವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ಕ್ಷತ್ರೀಯ ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿ, ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ನಗರದಲ್ಲಿರುವ ಸೋಮವಂಶ ಆರ್ಯ ಕ್ಷತ್ರೀಯ ಮತ್ತು ಚಿತ್ರಗಾರ ಜನಾಂಗವು ಗಣೇಶ ಮೂರ್ತಿ ಸೇರಿದಂತೆ ವಿವಿಧ ರೀತಿಯ ಮೂರ್ತಿಗಳನ್ನು ತಯಾರಿಸಿ ಜೀವನ ಸಾಗಿಸುತ್ತಿದೆ. ಈ ಬಾರಿ ಕೊರೊನಾದಿಂದಾಗಿ ವೃತ್ತಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.
ಗಣೇಶ ಚತುರ್ಥಿ ಹಬ್ಬ ನಮ್ಮ ಪಾಲಿಕೆಗೆ ದೊಡ್ಡ ಆದಾಯದ ಮೂಲ. ಹಬ್ಬಕ್ಕೆ ಎರಡು ತಿಂಗಳು ಮುಂಚೆಯೇ ಗಣೇಶ ಮೂರ್ತಿ ತಯಾರಿಕೆ ಆರಂಭವಾಗಬೇಕಿತ್ತು. ಕೊರೊನಾ ಆತಂಕದಿಂದಾಗಿ ಅದರ ಮೇಲೂ ಕರಿನೆರಳು ಬೀರಿದೆ. ಹಾಗಾಗಿ, ನಮಗೆ ಮಾರ್ಗದರ್ಶನದ ಜತೆಗೆ, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಹುಬ್ಬಳ್ಳಿ ಶಹರ ಘಟಕದ ಅಧ್ಯಕ್ಷ ಹನುಮಂತಸಾ ನಿರಂಜನ, ಯುವ ಘಟಕದ ಅಧ್ಯಕ್ಷ ಪ್ರಕಾಶ ಬುರಬುರೆ, ಅವಳಿನಗರದ ಸೋಮವಂಶ ಆರ್ಯ ಕ್ಷತ್ರೀಯ ಚಿತ್ರಗಾರ ಸಮಾಜದ ಅಧ್ಯಕ್ಷ ರಾಘವೇಂದ್ರ ಮುರಗೋಡ, ರವೀಂದ್ರ ರಾಮದುರ್ಗಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.