ಧಾರವಾಡ:ಇಲ್ಲಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ಪ್ರಥಮ ಘಟಿಕೋತ್ಸವ ಶನಿವಾರ ನಡೆದಿದ್ದು, 29 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.
ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ಚೆನ್ನೈನ ಎಸ್.ಎಸ್.ಆಮಿರ್ ಎರಡು ಚಿನ್ನದ ಪದಕಗಳನ್ನು ಪಡೆದರು. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಗೌರವ್ ಗುಪ್ತ ಒಂದು ಚಿನ್ನದ ಪದಕ ಪಡೆದರೆ, ಅತ್ಯುತ್ತಮ ವಿದ್ಯಾರ್ಥಿ ಬಹುಮಾನವನ್ನು ವೆಂಚೂರು ನವೀನ್ ಪಡೆದರು. ಕರ್ನಾಟಕದ ಐವರು ವಿದ್ಯಾರ್ಥಿಗಳೂ ಪದವಿ ಸ್ವೀಕರಿಸಿದರು.
ಮೈಂಡ್ ಟ್ರೀ ಕಂಪನಿ ಸಹ ಸಂಸ್ಥಾಪಕ ಸುಬ್ರೊತೊ ಬಾಗಚಿ ಘಟಿಕೋತ್ಸವ ಭಾಷಣ ಮಾಡಿದರು. ‘ದೇಶದಲ್ಲಿ ಬಡತನದಿಂದಾಗಿ ಓದು ಮೊಟಕುಗೊಳಿಸುವವರ ಸಂಖ್ಯೆ ದೊಡ್ಡದು. ಪ್ರೌಢಶಾಲೆ ಹಂತದಲ್ಲಿ
ಶೇ 30ರಷ್ಟು ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿಯುತ್ತಾರೆ. ಇವರಲ್ಲಿ ಶೇ 80ರಷ್ಟು ಮಂದಿಗೆ ಕೌಶಲ ಆಧಾರಿತ ಶಿಕ್ಷಣ ದೊರೆತರೆ, ಉದ್ಯೋಗಾರ್ಹತೆ ನೀಡಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷೆ ಸುಧಾ ಮೂರ್ತಿ, ನಿರ್ದೇಶಕ ಪ್ರೊ.ಕವಿ ಮಹೇಶ, ಕುಲಸಚಿವ ಪ್ರೊ.ಎಸ್. ಬಸವರಾಜಪ್ಪ ಇದ್ದರು. 2015ರಲ್ಲಿ ಐಐಐಟಿ ಕಾರ್ಯಾರಂಭ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.