ಧಾರವಾಡ: ‘ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಆರನೇ ಘಟಿಕೋತ್ಸವ ಜುಲೈ 19ರಂದು ಜರುಗಲಿದ್ದು, 227 ಮಂದಿ ವಿವಿಧ ಪದವಿ ಪಡೆಯುವರು’ ಎಂದು ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ಆರ್.ದೇಸಾಯಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಐಐಟಿಯ ಕೇಂದ್ರೀಯ ವಿದ್ಯಾಗ್ರಹಣ ಸಭಾಗೃಹದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ.ಅಭಯ ಕರಂಡೀಕರ, ಗೋವಾರ ಐಐಟಿ ನಿರ್ದೇಶಕ ಪ್ರೊ.ಧೀರೇಂದ್ರ ಕಟ್ಟಿ ಪಾಲ್ಗೊಳ್ಳುವರು. ಇಬ್ಬರು ಚಿನ್ನದ ಪದಕ, ಏಳು ಮಂದಿ ಬೆಳ್ಳಿ ಪದಕ ಹಾಗೂ ಒಬ್ಬರು ನಗದು ಬಹುಮಾನ ಪಡೆಯುವರು’ ಎಂದರು.
‘ಪ್ರಸ್ತುತ ಧಾರವಾಡ ಐಐಟಿಯಲ್ಲಿ 1,320 ವಿದ್ಯಾರ್ಥಿಗಳು ಇದ್ದಾರೆ. ಈ ವರ್ಷ ಕೆಲ ಹೊಸ ಆರಂಭಿಸಲಾಗಿದೆ. ಎಂ.ಎಸ್ಸಿ (ಎಕಾನಾಮಿಕ್ಸ್) ಆರಂಭಿಸಲು ಉದ್ದೇಶಿಸಲಾಗಿದೆ. ‘ಫೇಸ್:1 ಬಿ’ನಡಿ ₹ 2,200 ಕೋಟಿ ಅನುದಾನ ಮಂಜೂರಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಲಿವೆ’ ಎಂದು ತಿಳಿಸಿದರು.
ಬೆಳೆ ನಿರ್ವಹಣೆ ಮತ್ತು ಇಳುವರಿ ಸುಧಾರಣೆಗೆ ತಂತ್ರಜ್ಞಾನ ನೆರವು, ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಅನ್ವಯಿಕತೆಗೆ ಸಂಬಂಧಿಸಿದಂತೆ ಐಐಟಿಯಲ್ಲಿ ಅಧ್ಯಯನಗಳು ನಡೆಯುತ್ತಿವೆ. ಪರಿಸರ ಸ್ನೇಹಿ ತಂತ್ರಜ್ಞಾನಗಳ (ಸೌರಶಕ್ತಿ, ಪವನ ಶಕ್ತಿ, ಮಳೆ ನೀರು ಸಂಗ್ರಹ...) ಅಳವಡಿಕೆ ಕುರಿತು ಸ್ಥಳೀಯವಾಗಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಐಐಟಿಯ ಕುಲಸಚಿವ ಕಲ್ಯಾಣ ಕುಮಾರ ಭಟ್ಟಚಾರ್ಯ, ಪ್ರೊ.ಧೀರಜ್ ವಿ.ಪಾಟೀಲ್, ಪ್ರೊ.ಅಮರನಾಥ ಹೆಗಡೆ, ಪ್ರೊ.ಎನ್.ಎಸ್.ಪುಣೆಕರ್, ಪ್ರೊ. ಪ್ರತ್ಯಾಸಾ ಭುವಿ, ದೀಲಿಪ ಎ.ಡಿ., ಪ್ರೊ.ಸಿ.ರವಿಕುಮಾರ, ಸೂರ್ಯ ಪ್ರತಾಪ ಸಿಂಗ್, ಜಯಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.