ADVERTISEMENT

ವಿಜ್ಞಾನ ಮೇಳ | ಪ್ರಗತಿಗೆ ವಿನೂತನ ವಿಜ್ಞಾನ ಅವಶ್ಯ: ಎಸ್.ಎಂ. ಶಿವಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:52 IST
Last Updated 12 ಡಿಸೆಂಬರ್ 2025, 5:52 IST
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿನಿಯರು ಪ್ರದರ್ಶಿಸಿದ, ಒಂದು ಸ್ವಿಚ್ ಆನ್ ಮಾಡಿದರೆ ಇಡೀ ರಾಮಮಂದಿರದ ವಿದ್ಯುದ್ದೀಪಗಳು ಬೆಳಗುವ ಮಾದರಿಯನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು 
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿನಿಯರು ಪ್ರದರ್ಶಿಸಿದ, ಒಂದು ಸ್ವಿಚ್ ಆನ್ ಮಾಡಿದರೆ ಇಡೀ ರಾಮಮಂದಿರದ ವಿದ್ಯುದ್ದೀಪಗಳು ಬೆಳಗುವ ಮಾದರಿಯನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು    

ಹುಬ್ಬಳ್ಳಿ: ‘ಭಾರತದಲ್ಲಿ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ, ವಿಜ್ಞಾನ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ. ದೇಶ ಪ್ರಗತಿ ಸಾಧಿಸಬೇಕಾದರೆ ವಿನೂತನವಾದ ವಿಜ್ಞಾನದ ಅವಶ್ಯಕತೆ ಇದೆ’ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ್‌ ಹೇಳಿದರು. 

ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರ ಹಾಗೂ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿಜ್ಞಾನಿ, ತಂತ್ರಜ್ಞಾನಿ ಹಾಗೂ ಎಂಜಿನಿಯರ್‌ ನಡುವೆ ವ್ಯತ್ಯಾಸವಿದೆ. ಪ್ರಕೃತಿಯ ಕೌತುಕದ ಕುರಿತು ವಿಚಾರ ಮಾಡುವವರು ವಿಜ್ಞಾನಿ. ಅವರು ಹೇಳಿದ್ದನ್ನು ಅಧ್ಯಯನ ಮಾಡಿ, ಏನೆಲ್ಲ ಮಾಡಬಹುದೆಂದು ಯೋಚಿಸುವವರು ತಂತ್ರಜ್ಞಾನಿ. ಇದನ್ನು ಕಾರ್ಯರೂಪಕ್ಕೆ ತರುವವರು ಎಂಜಿನಿಯರ್‌ಗಳು. ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಅರಿವು ಅಗತ್ಯ. ತಾವು ಏನಾಗಬೇಕೆಂಬ ಸ್ಪಷ್ಟತೆ ಇರಬೇಕು’ ಎಂದು ತಿಳಿಸಿದರು.

ADVERTISEMENT

‘100 ವರ್ಷಗಳಲ್ಲಿ ವಿಜ್ಞಾನವು ತಂತ್ರಜ್ಞಾನವಾಗಿ ಪರಿವರ್ತನೆಯಾಗಿದೆ. ವಾಹನ ಚಾಲನೆ, ಬ್ಯಾಂಕಿಂಗ್‌, ನಿರ್ಮಾಣ ವಲಯ, ವೈದ್ಯಕೀಯ, ಸಾಫ್ಟ್‌ವೇರ್‌, ನ್ಯಾಯಾಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿನ 10–15 ವರ್ಷಗಳಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಮಾನವನೇ ಇಲ್ಲದೆ, ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡಲಿವೆ’ ಎಂದರು.

‘ಮನೆ ಮನೆಗೆ ರೊಬೊಟ್ ಬರುವ ಕಾಲ ದೂರವಿಲ್ಲ. ಮನುಷ್ಯನಿಗೆ ಉದ್ಯೋಗವೇ ಇರದ ಆ ಸಂದರ್ಭವನ್ನು ಎದುರಿಸಲು ವಿದ್ಯಾರ್ಥಿಗಳು ಈಗಿನಿಂದಲೇ ಚಿಂತನೆ ನಡೆಸಬೇಕು. ಮಹತ್ತರವಾದ ಸಾಧನೆಯ ಕನಸು ಕಂಡು, ಅದರ ಬೆನ್ನತ್ತಿ ಯಶಸ್ವಿಯಾಗಬೇಕು. ಅಂಕಗಳಿಗೆ ಬೆಲೆ ಇಲ್ಲ ಎಂಬುದನ್ನು ಮನಗಂಡು, ತಮ್ಮ ಆಸಕ್ತಿ ನಿಗದಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು, ಮಕ್ಕಳನ್ನು ಸಜ್ಜುಗೊಳಿಸಿಬೇಕು’ ಎಂದು ಸಲಹೆ ನೀಡಿದರು.

ಮೇಳದ ಸಂಯೋಜಕಿ ಎಸ್.ಎಸ್. ಮುಲ್ಕಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲೆ, ಬಾಲಕರ ಪ್ರೌಢಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆ ವಿಭಾಗದಲ್ಲಿ ಉತ್ತಮ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅನುರಾಧ, ಲ್ಯಾಮಿಂಗ್ಟನ್‌ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಪೈಕೋಟಿ, ಕಾರ್ಯಾಧ್ಯಕ್ಷ ಸುರೇಶ ಕಿಣಿ, ಆಡಳಿತ ಮಂಡಳಿ ಕಾರ್ಯದರ್ಶಿ ಶಶಿ ಸಾಲಿ, ಸದಸ್ಯ ಮುರುಳೀಧರ ಕರ್ಜಗಿ, ಪ್ರಾಥಮಿಕ ಶಾಲೆಯ ಪ್ರಾಚಾರ್ಯೆ ಸೌಮ್ಯಪ್ರಭು ಇದ್ದರು.

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳವನ್ನು ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ್‌ ಅವರು ರಾಕೆಟ್‌ ಮಾದರಿ ಉಡ್ಡಯನ ಮಾಡುವ ಮೂಲಕ ಉದ್ಘಾಟಿಸಿದರು  
ದೇಶದಲ್ಲಿ ಇನ್ನೂ ನಕಲು ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಹೊಸ ಚಿಂತೆನೆ ಮೂಡಿ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ತಂದಲ್ಲಿ ಭಾರತ ವಿಶ್ವಗುರು ಆಗುತ್ತದೆ
ಎಸ್.ಎಂ. ಶಿವಪ್ರಸಾದ್‌ ಧಾರವಾಡ ಐಐಟಿ ಪ್ರಾಧ್ಯಾಪಕ
ಗಮನಸೆಳೆದ ವಿಜ್ಞಾನ ಮಾದರಿ
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಸ್ಮಾರ್ಟ್ ಕಸದಬುಟ್ಟಿ ಎಲ್‌ಪಿಜಿ ಗ್ಯಾಸ್ ಸೋರಿಕೆಯಾದರೆ ಎಚ್ಚರಿಕೆ ನೀಡುವ ಸೈರನ್‌ ರಾತ್ರಿ ಯಾರಾದರೂ ಮನೆ ಬಳಿ ಬಂದರೆ ಸೂಚನೆ ನೀಡುವ ಅಲಾರಾಂ ಭೂಕಂಪನ ತಿಳಿಸುವ ಸೂಚಕ ಉಪ್ಪು ನೀರಿನಲ್ಲಿ ವಿದ್ಯುತ್‌ ಉತ್ಪಾದನೆ ವಾಹನ ಸಂಚಾರ ಹಾಗೂ ನಿಲುಗಡೆಯ ಮಾಹಿತಿ ನೀಡುವ ಸೆನ್ಸಾರ್‌ ಸ್ವಯಂಚಾಲಿತ ರೈಲ್ವೆ ಗೇಟ್‌ ಗುಡ್ಡದ ಕೆಳಗೆ ಪವನ ಶಕ್ತಿ ಉತ್ಪಾದನೆ ಪ್ರಾಣಿಗಳ ಸಂಚಾರ ಸೂಚಕ ಭಾರ ಬಿದ್ದರೆ ಉತ್ಪಾದನೆಯಾಗುವ ವಿದ್ಯುತ್‌ ಮಲಗದಂತೆ ಎಚ್ಚರಗೊಳಿಸುವ ಕನ್ನಡಕ ಪುಸ್ತಕ ಎಣಿಸುವ ಯಂತ್ರ ಮೊದಲಾದ ಮಾದರಿಗಳು ಗಮನಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.