ಹುಬ್ಬಳ್ಳಿ: ಪುನರ್ ವಿಂಗಡಣೆಯಿಂದಾಗಿ ಅವಳಿ ನಗರದಲ್ಲಿ ವಾರ್ಡ್ಗಳಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸ್ವಚ್ಛತೆಗೆ ಒತ್ತು ಕೊಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಸೋಮವಾರ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ’ಹೊಸ ವಾರ್ಡ್ಗಳಾದರೂ ಪೌರ ಕಾರ್ಮಿಕರ ಮೊದಲಿನಷ್ಟೇ ಇದ್ದಾರೆ. ಇದರಿಂದ ನಿರೀಕ್ಷೆಯಷ್ಟು ಸ್ವಚ್ಛತಾ ಕೆಲಸ ನಡೆಯುತ್ತಿಲ್ಲ‘ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತಡಾ. ಬಿ. ಗೋಪಾಲಕೃಷ್ಣ ’ಸರ್ಕಾರದ ನಿಯಮಾವಳಿಯಂತೆ ಪ್ರಸ್ತುತ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪೌರ ಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು‘ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರಿ ಜಾಗ ಲಭ್ಯವಿಲ್ಲದ್ದರಿಂದ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆದರೆ, ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪಾಲಿಕೆ ಒಡೆತನದ ಖುಲ್ಲಾ ಜಾಗೆಗಳನ್ನು ಖಾಸಗಿಯವರು ಅತಿಕ್ರಮಿಸಿಕೊಂಡು ವ್ಯಾಪಾರ- ವಹಿವಾಟು ನಡೆಸುತ್ತಿದ್ದು, ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅಬ್ಬಯ್ಯ ಸೂಚಿಸಿದರು.
ಪಾಲಿಕೆ ಜಂಟಿ ಆಯುಕ್ತ ಆನಂದ ಕಲ್ಲೋಳಿಕರ, ಅಧೀಕ್ಷಕ ಇಂಜಿನಿಯರ್ ಟಿ. ತಿಮ್ಮಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ವಿಜಯಕುಮಾರ ಹಾಗೂ ಪಾಲಿಕೆಯ ವಲಯಾಧಿಕಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.