ADVERTISEMENT

ಪ್ರಭಾವಿಗಳು ಮನ್ಸೂರ್‌ನನ್ನು ಉಳಿಸುವುದಿಲ್ಲ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 13:21 IST
Last Updated 2 ಜುಲೈ 2019, 13:21 IST
   

ಹುಬ್ಬಳ್ಳಿ: ‘ಐಎಂಎ ಹಗರಣದ ಹಿಂದೆ ಸರ್ಕಾರದ ಪ್ರಭಾವಿಗಳ ಕೈವಾಡವಿದೆ. ಹಾಗಾಗಿ, ಐಎಂಎ ಸಮೂಹ ಕಂಪನಿಯ ಮಾಲೀಕ ಮನ್ಸೂರ್ ಖಾನ್‌ ಜೀವಭಯದಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ತಮ್ಮ ಹೆಸರು ಹೊರಬರುವುದಕ್ಕೂ ಮುಂಚೆಯೇ ಪ್ರಭಾವಿಗಳು ಆತನನ್ನು ಮುಗಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

‘ಹಗರಣದಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಹೆಸರು ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ದೇಶ ತೊರೆಯವುದಕ್ಕೆ ಮುಂಚೆ ಮನ್ಸೂರ್ ಬಿಡುಗಡೆ ಮಾಡಿರುವ ವಿಡಿಯೊ, ಈ ಜಾಲದಲ್ಲಿ ಮತ್ತಷ್ಟು ಪ್ರಭಾವಿಗಳು ಭಾಗಿಯಾಗಿರುವ ಸುಳಿವು ನೀಡುತ್ತದೆ. ಹಾಗಾಗಿ, ಅವರಿಗೆ ಮನ್ಸೂರ್ ಜೀವಂತವಾಗಿ ಉಳಿಯುವುದು ಬೇಕಿಲ್ಲ’ ಎಂದು ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಐಎಂಎಯಲ್ಲಿ ಸಾವಿರಾರು ಬಡ ಮುಸಲ್ಮಾನರು ಹಣ ಹೂಡಿಕೆ ಮಾಡಿದ್ದಾರೆ. ಅವರಿಗೆ ನ್ಯಾಯ ಸಿಗಬೇಕಾದರೆ, ಆತ ಜೀವಂತವಾಗಿ ಉಳಿಯಬೇಕು. ಸರ್ಕಾರ ಆತನ ಜೀವಕ್ಕೆ ರಕ್ಷಣೆ ಕೊಡಬೇಕು. ಜತೆಗೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.