ADVERTISEMENT

ಸಚಿವರ ಕೊಠಡಿಗಳ ತಪಾಸಣೆ

ವಾರೆಂಟ್‌ ಇಲ್ಲದ್ದಕ್ಕೆ ಸಿಎಂ ಕೊಠಡಿ ಪ್ರವೇಶಿಸಲಾಗದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:13 IST
Last Updated 13 ಮೇ 2019, 20:13 IST
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿಯ ಹೋಟೆಲ್‌ ಡೆನಿಸನ್‌ ಕೊಠಡಿಗಳ ತಪಾಸಣೆಗೆ ಮುಂದಾದಾಗ ಹೊರಗಡೆ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿಯ ಹೋಟೆಲ್‌ ಡೆನಿಸನ್‌ ಕೊಠಡಿಗಳ ತಪಾಸಣೆಗೆ ಮುಂದಾದಾಗ ಹೊರಗಡೆ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು   

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಪ್ರಚಾರಕ್ಕಾಗಿ ನಗರದ ಡೆನಿಸನ್‌ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕೊಠಡಿ ತಪಾಸಣೆಗೆ ಮುಂದಾಗಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಾರೆಂಟ್‌ ಇಲ್ಲದ್ದರಿಂದ ಚೆಕ್‌ ಮಾಡದೇ ಬರಿಗೈಲಿ ತೆರಳಿದ್ದಾರೆ.

ಕುಂದಗೋಳದಲ್ಲಿ ಪ್ರಚಾರ ಮುಗಿಸಿಕೊಂಡು ಕುಮಾರಸ್ವಾಮಿ ಅವರು ರಾತ್ರಿ 11ರ ವೇಳೆಗೆ ಹೋಟೆಲ್‌ಗೆ ಬಂದಾಗ ಅವರ ತಂಗಿದ್ದ ಕೊಠಡಿಯನ್ನು ಐಟಿ ಅಧಿಕಾರಿ ವೈ.ಎನ್‌. ನವಲಗುಂದ ನೇತೃತ್ವದ ತಂಡ ತಪಾಸಣೆಗೆ ಮುಂದಾಯಿತು. ಆಗ ಸಿಎಂ ಅವರು, ವಾರೆಂಟ್‌ ಎಲ್ಲಿ ಎಂದು ಪ್ರಶ್ನಿಸಿದರು. ವಾರೆಂಟ್‌ ಇಲ್ಲದ್ದರಿಂದ ಅಧಿಕಾರಿಗಳು ತಪಾಸಣೆ ಕೈಬಿಟ್ಟರು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ರಾತ್ರಿ 9.45ರ ವೇಳೆ ಹೋಟೆಲ್ ಪ್ರವೇಶಿಸಿದ ಗೋವಾ ಹಾಗೂ ಬೆಳಗಾವಿ ವಿಭಾಗದ ಐಟಿ ಅಧಿಕಾರಿಗಳ ತಂಡವು ಸಚಿವರ ಹಾಗೂ ರಾಜಕೀಯ ಮುಖಂಡ ಕೊಠಡಿಗಳನ್ನು ಪರಿಶೀಲಿಸಿದೆ.

ADVERTISEMENT

ಸಚಿವ ಜಮೀರ್ ಅಹ್ಮದ್ ಅವರು ತಂಗಿದ್ದ ಕೊಠಡಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದರು. ನಂತರ ಸಚಿವರಾದ ಬಂಡೆಪ್ಪ ಕಾಶೆಂಪುರ, ಆರ್.ವಿ. ದೇಶಪಾಂಡೆ, ಎಂ.ಟಿ.ಬಿ. ನಾಗರಾಜ್, ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಸೇರಿದಂತೆ ಹಲವು ಕೊಠಡಿಗಳನ್ನು ಚೆಕ್‌ ಮಾಡಲಾಯಿತು. ಗ್ರಾಹಕರ ಕೊಠಡಿಗಳನ್ನೂ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.