ಹುಬ್ಬಳ್ಳಿ: ‘ಕೃಷ್ಣಾ ಮೇಲ್ದಂಡೆ ಯೊಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಜಾರಿಗೊಳಿಸಬೇಕು. ಯೋಜನೆಗೆ ಒಳಪಟ್ಟ ಭೂ ಸಂತ್ರಸ್ತ ರೈತರಿಗೆ ಕೂಡಲೇ ಭೂ ಪರಿಹಾರ ನೀಡಬೇಕು‘ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಹಲವು ವರ್ಷಗಳಿಂದ ಈ ಭಾಗದ ರೈತರು ಹೋರಾಟ ನಡೆಸುತ್ತಾ ಬಂದಿದ್ದರೂ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಲಾಲ್ ಬಹುದ್ದೂರು ಶಾಸ್ತ್ರಿ ಅಣೆಕಟ್ಟೆಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲು ಶನಿವಾರ ಆಲಮಟ್ಟಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುಕೆಪಿ ಯೋಜನೆಯ ಭೂ ಸಂತ್ರಸ್ತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ನಿರ್ಲಕ್ಷಿಸಿದರೆ ಬಾಗಿನ ಅರ್ಪಣೆ ವೇಳೆ ಘೇರಾವ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಅಖಂಡ ಕರ್ನಾಟಕ ಉಳಿವಿಗಾಗಿ ರಾಜ್ಯ ಸರ್ಕಾರವು ಯುಕೆಪಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಜಾರಿಗೊಳಿಸಬೇಕು. ಯೋಜನೆಗೆ ಒಳಪಟ್ಟ ನೀರಾವರಿ ಭೂಮಿಯ ಪ್ರತಿ ಎಕರೆಗೆ ₹50 ಲಕ್ಷ. ಒಣ ಭೂಮಿ ಎಕರೆಗೆ ₹40 ಲಕ್ಷ ಭೂ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ರೈತ ಸೇನೆಯ ಮುಖಂಡ ಶಂಕರ ಅಂಬಲಿ ಅವರು, ‘ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿಯನ್ನು ವಶಪಡಿಸಿಕೊಂಡ ನಂತರ ಸಂತ್ರಸ್ತ ರೈತರಿಗೆ ಬೆಳೆವಿಮೆ, ಬ್ಯಾಂಕ್ ಸಾಲ ಸೌಲಭ್ಯ, ಬೆಳೆ ಪರಿಹಾರ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರವು ಭೂ ಪರಿಹಾರ ನೀಡಲು ಸಾಧ್ಯವಾಗದೇ ಇದ್ದಲ್ಲಿ ರೈತರಿಗೆ ಸಂಬಂಧಿಸಿದ ಭೂಮಿಯನ್ನು ಮರಳಿ ಅವರಿಗೆ ನೀಡಬೇಕು’ ಎಂದೂ ಒತ್ತಾಯಿಸಿದರು.
ರೈತ ಮುಖಂಡರಾದ ಪ್ರಕಾಶ ಶಿರಹಟ್ಟಿ, ಸದಾಶಿವ ಮಾಡನ್ನವರ, ಪ್ರವೀಣ ಯರಗಟ್ಟಿ, ರಾಜು ಅಂಗಡಿ, ಶಂಕರಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.