ADVERTISEMENT

ಆನ್‌ಲೈನ್‌ನಲ್ಲಿ ಕೃಷ್ಣನ ದರ್ಶನ

ಇಸ್ಕಾನ್‌ನಲ್ಲಿ ಗಮನ ಸೆಳೆದ ಸುಂದರ ಅಲಂಕಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:53 IST
Last Updated 12 ಆಗಸ್ಟ್ 2020, 15:53 IST
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬುಧವಾರ ಇಸ್ಕಾನ್ ದೇವಸ್ಥಾನದಲ್ಲಿ ಕೃಷ್ಣ ಬಲರಾಮ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬುಧವಾರ ಇಸ್ಕಾನ್ ದೇವಸ್ಥಾನದಲ್ಲಿ ಕೃಷ್ಣ ಬಲರಾಮ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಹುಬ್ಬಳ್ಳಿ: ಇಲ್ಲಿಂದ ಧಾರವಾಡಕ್ಕೆ ಹೋಗುವ ರಸ್ತೆಯಲ್ಲಿರುವ ಇಸ್ಕಾನ್‌ ಮಂದಿರದಲ್ಲಿ ಬುಧವಾರ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಯಿತು. ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲದ ಕಾರಣ ಭಕ್ತರು ಆನ್‌ಲೈನ್‌ ಮೂಲಕವೇ ಕೃಷ್ಣನ ದರ್ಶನ ಪಡೆದರು.

ದೇವಸ್ಥಾನದ ಕಟ್ಟಡವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ 4.30ಕ್ಕೆ ಕೃಷ್ಣ, ಬಲರಾಮರಿಗೆ ಮಹಾಮಂಗಳಾರತಿ ಮಾಡುವ ಮೂಲಕ ದಿನದ ಪೂಜಾ ಕೈಂಕರ್ಯ ಆರಂಭಗೊಂಡವು. ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಶೃಂಗಾರ ಆರತಿ ವಿಶೇಷ ಆಕರ್ಷಣೆಯಾಗಿತ್ತು. ಕೃಷ್ಣ ಬಲರಾಮರಿಗೆ 108 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು.

ಸ್ವರ್ಣ ಪೀಠದ ಮೇಲೆ ಆರ್ಚಾ ವಿಗ್ರಹಗಳನ್ನು ಸ್ಥಾಪಿಸಿ ಮಹಾಭಿಷೇಕ ನಡೆಸಲಾಯಿತು. ನಂತರ ಎಳ್ಳು, ಶುದ್ಧೋದಕ ಸ್ನಾನ, ಪಂಚಗವ್ಯ ಸ್ನಾನ, ಪಂಚಾಮೃತ ಸ್ನಾನ, ರತ್ನೋದಕ ಸ್ನಾನ, ಫಲೋದಕ ಸ್ನಾನ ಹೀಗೆ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು. ಹುಬ್ಬಳ್ಳಿ–ಧಾರವಾಡದ ಇಸ್ಕಾನ್‌ ಉಪಾಧ್ಯಕ್ಷ ರಘೋತ್ತಮ ದಾಸ್ ಕೃಷ್ಣನ ಅವತಾರಗಳ ಕುರಿತು ಪ್ರವಚನ ನೀಡಿದರು. ಈ ಎಲ್ಲಾ ಕಾರ್ಯಕ್ರಮಗಳನ್ನು ಯೂ ಟ್ಯೂಬ್‌ ಮೂಲಕ ಪ್ರಸಾರ ಮಾಡಲಾಗಿತ್ತು.

ADVERTISEMENT

ನಗರದ ಗಣೇಶ ದೇವಸ್ಥಾನದಲ್ಲಿ ಮೊಸರು ಗಡಿಗೆ ಒಡೆಯಲಾಯಿತು.

ಆಚರಣೆ: ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಗರದ ಪಕ್ಷದ ಕಾರ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿತು. ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷದ ಅಲಂಕಾರ ಮಾಡಲಾಗಿತ್ತು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ನಾಗರಾಜ್ ಗೌರಿ, ಪ್ರಮುಖರಾದ ತಾರಾದೇವಿ ವಾಲಿ, ನವೀದ್ ಮುಲ್ಲಾ. ಜಯಲಕ್ಷ್ಮಿ ದೊಡ್ಡಮನಿ, ಸಂಗೀತಾ ಪೂಜಾರ, ರಾಜೇಶ್ವರಿ ಬಿಲಾನಾ, ಶಾಂತಾ ಇರಕಲ್, ಗೌರಮ್ಮ ನಾಡಗೌಡರ, ಬಸವರಾಜ ಬೆಣಕಲ್, ಬಾಳಮ್ಮ ಜಂಗನವರ, ಶ್ರೇಯಾ ಎಸ್. ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.