
ಹುಬ್ಬಳ್ಳಿ: ‘ಗ್ರಾಮೀಣ ಭಾಗದಲ್ಲಿನ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು. ಇದರಿಂದ ಧಾರವಾಡ ವಲಯಕ್ಕೆ ಪ್ರತಿಭಾವಂತ ಕ್ರಿಕೆಟ್ ಆಟಗಾರರು ದೊರೆಯಲಿದ್ದಾರೆ‘ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಕ್ಷ್ಮೇಶ್ವರ, ರಾಣೆಬೆನ್ನೂರ, ನವಲಗುಂದ, ಗೋಕಾಕ, ಹೊನ್ನವಾರ, ಕುಮಟಾ ಸೇರಿದಂತೆ ಈ ಭಾಗದ ತಾಲ್ಲೂಕುಗಳಲ್ಲಿ ಕ್ರಿಕೆಟ್ ಆಟಗಾರರನ್ನು ಗುರುತಿಸಲು ಕಮಿಟಿ ರಚಿಸಲಾಗುವುದು‘ ಎಂದರು.
‘ಧಾರವಾಡ ವಲಯದ ಹುಬ್ಬಳ್ಳಿ, ಬೆಳಗಾವಿ ಹಾಗೂ ಗೋಕಾಕ ಮೈದಾನದ ಕಟ್ಟಡ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕೆ ಕೆಎಸ್ಸಿಎ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ವಲಯಕ್ಕೆ ಅಭಿಲಾಷ ಜೋಶಿ ಅವರು ಆಯ್ಕೆಗಾರರಾಗಿ ಬರಲಿದ್ದು, ಅವರೊಂದಿಗೆ ಸೇರಿ ಈ ಭಾಗದಲ್ಲಿ ಕ್ರಿಕೆಟ್ ಬೆಳೆಸಲಾಗುವುದು’ ಎಂದು ಹೇಳಿದರು.
‘ಹುಬ್ಬಳ್ಳಿ ಮೈದಾನದ ಕಟ್ಟಡಕ್ಕೆ ಹಾಗೂ ಮೂಲಸೌಕರ್ಯಕ್ಕೆ ₹50ಲಕ್ಷ ಹಾಗೂ ಬೆಳಗಾವಿಗೆ ₹1ಕೋಟಿ ವೆಚ್ಚವಾಗಲಿದೆ. ಶೀಘ್ರದಲ್ಲಿ ಎಲ್ಲ ಸೌಕರ್ಯ ಒದಗಿಸುವ ಮೂಲಕ ಹೆಚ್ಚು ರಣಜಿ, ಮಹರಾಜ ಹಾಗೂ ಬಿಸಿಸಿಐ ಪಂದ್ಯಗಳ ಇಲ್ಲಿಗೆ ಬರುವಂತೆ ಮಾಡಲಾಗುವುದು‘ ಎಂದರು.
ಕಮಿಟಿ ರಚನೆ: ಜೂನಲ್, ಆಡಳಿತ, ಹಣಕಾಸು, ಟೂರ್ನಮೆಂಟ್, ಆಯ್ಕೆಗಾರರ ಕಮಿಟಿ ರಚಿಸಲಾಗುವುದು ಎಂದು ಹೇಳಿದರು.
‘ಧಾರವಾಡ ವಲಯದಿಂದ 1ನೇ ಡಿವಿಷನ್ ಲೀಗ್ ಪಂದ್ಯ ಆರಂಭವಾಗಿದ್ದು, 12 ತಂಡಗಳಿಂದ 66 ಪಂದ್ಯಗಳು ನಡೆಯಲಿವೆ. ಮಾರ್ಚ್ನಲ್ಲಿ 1, 2, 3 ಡಿವಿಷನ್ ಪಂದ್ಯಗಳ ಆಡಿಸಲು ರೂಪಿಸಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶಾಲಾ- ಕಾಲೇಜು ಮಟ್ಟದ ಅಂಡರ್ 16, 19 ಪಂದ್ಯಗಳನ್ನು ಆಡಿಸಲಾಗುವುದು‘ ಎಂದು ಮಾಹಿತಿ ನೀಡಿದರು.
‘ಧಾರವಾಡ ವಲಯದಲ್ಲಿ ಮಹಿಳಾ ಕ್ರಿಕೆಟ್ ಪ್ರೋತ್ಸಾಹಿಸಲು ಪ್ರತ್ಯೇಕ ಪಂದ್ಯಗಳನ್ನು ಆಡಿಸಲಾಗುವುದು’ ಎಂದು ಹೇಳಿದರು.
ಡಿ.23ರಂದು ಬೆಳಿಗ್ಗೆ 7.30ಕ್ಕೆ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಅಂಡರ್ 14 ಆಟಗಾರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 3–4 ತಂಡ ಮಾಡಿ ಪಂದ್ಯ ಆಡಿಸಿ 31 ರೊಳಗೆ ಒಂದು ಉತ್ತಮ ತಂಡ ಆಯ್ಕೆ ಮಾಡಲಾಗುವುದು.ವೀರಣ್ಣ ಸವಡಿ ನಿಮಂತ್ರಕ ಕೆಎಸ್ಸಿಎ ಧಾರವಾಡ ವಲಯ
‘ ಹುಬ್ಬಳ್ಳಿ: ‘ಧಾರವಾಡ ವಲಯದಿಂದ ಕ್ರಿಕೆಟಿಗರು ಉತ್ತಮ ಆಟವಾಡಿ ಕರ್ನಾಟಕಕ್ಕೆ ಹೆಸರು ತರಬೇಕು. ಉತ್ತಮ ಕ್ರಿಕೆಟ್ ಆಟಗಾರರಾಗಿ ಬೆಳೆಯಬೇಕು‘ ಎಂದು ಹಿರಿಯ ಕ್ರಿಕೆಟರ್ ಶಾಂತಾರಾಮ ಶೆಟ್ಟಿ ಹೇಳಿದರು. ಇಲ್ಲಿಯ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಮೈದಾನದಲ್ಲಿ ಶನಿವಾರ 2025–26ನೇ ಸಾಲಿನ ಕೆಎಸ್ಸಿಎ ಧಾರವಾಡ ವಲಯ 1ನೇ ಡಿವಿಸನ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಎಸ್ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ ಅವರು ‘ಕ್ರಿಕೆಟ್ ಆಟಗಾರರಿಗೆ ಅಗತ್ಯ ಸೌಲಭ್ಯಗಳಿದ್ದು ಇದನ್ನು ಬಳಸಿಕೊಂಡು ರಾಜ್ಯಕ್ಕೆ ಹೆಸರು ತರಬೇಕು’ ಎಂದು ಹೇಳಿದರು. ಹಿರಿಯ ಕ್ರಿಕೆಟರ್ ಶಿವಾನಂದ ಗುಂಜಾಳ ಮಾತನಾಡಿದರು. ವಿಜಯ ಕಾಮತ ವೀರೇಶ ಹುಂಡಿ ಬಾಬು ರಾಯಣ್ಣ ದಯಾನಂದ ಶೆಟ್ಟಿ ಪ್ರಮೋದ ಕಾಮತ ಚನ್ನವೀರ ಮುಂಗರವಾಡಿ ನದೀಮ್ ಶೇಖ ಭಿಮರಾವ ಜೋಶಿ ಅಹ್ಮದ ರಝಾ ಕಿತ್ತೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.