ADVERTISEMENT

ಹಿಂದೂ ಬದಲು ಭಾರತೀಯ ಎನ್ನಿ: ಸಾಹಿತಿ ಕುಂ.‌ ವೀರಭದ್ರಪ್ಪ ಸಲಹೆ

'ಹಿಂದೂ ಎಂಬುದು ಇರಾಕ್‌ನ ಪ್ರದೇಶವೊಂದರ ಹೆಸರೇ ಹೊರತು, ಧರ್ಮದ ಹೆಸರಲ್ಲ'

​ಪ್ರಜಾವಾಣಿ ವಾರ್ತೆ
Published 3 ಮೇ 2022, 19:43 IST
Last Updated 3 ಮೇ 2022, 19:43 IST
ಬಸವ ಜಯಂತಿ ಮತ್ತು ರಂಜಾನ್ ಅಂಗವಾಗಿ, ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ‌ ಮಂಗಳವಾರ ನಡೆದ ಸೌಹಾರ್ದ ದಿನಾಚರಣೆ ಹಾಗೂ ಭಾರತೀಯ ಶರಣ ಸೇನಾ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಡಾ. ಕುಂ. ವೀರಭದ್ರಪ್ಪ ಮಾತನಾಡಿದರು – ಪ್ರಜಾವಾಣಿ ಚಿತ್ರ
ಬಸವ ಜಯಂತಿ ಮತ್ತು ರಂಜಾನ್ ಅಂಗವಾಗಿ, ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ‌ ಮಂಗಳವಾರ ನಡೆದ ಸೌಹಾರ್ದ ದಿನಾಚರಣೆ ಹಾಗೂ ಭಾರತೀಯ ಶರಣ ಸೇನಾ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಡಾ. ಕುಂ. ವೀರಭದ್ರಪ್ಪ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಹಿಂದೂ ಬದಲಿಗೆ ನಾವೆಲ್ಲರೂ ಭಾರತೀಯ ಎಂದು ಹೇಳಿಕೊಳ್ಳಬೇಕು. ಹಿಂದೂ ಎಂಬುದು ಇರಾಕ್‌ನ ಪ್ರದೇಶವೊಂದರ ಹೆಸರೇ ಹೊರತು, ಧರ್ಮದ ಹೆಸರಲ್ಲ.‌ ನಮ್ಮೆಲ್ಲರ ಮೈಯಲ್ಲಿ‌ ಹರಿಯುತ್ತಿರುವುದು ಭಾರತೀಯ ರಕ್ತವೇ ಹೊರತು, ಬೇರಾವುದೇ ದೇಶದ ರಕ್ತವಲ್ಲ’ ಎಂದು ಸಾಹಿತಿ ಡಾ. ಕುಂ.ವೀರಭದ್ರಪ್ಪ ಹೇಳಿದರು.

ಬಸವ ಜಯಂತಿ ಮತ್ತು ರಂಜಾನ್ ಅಂಗವಾಗಿ, ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ‌ ಮಂಗಳವಾರ ನಡೆದ ಸೌಹಾರ್ದ ದಿನಾಚರಣೆ
ಹಾಗೂ ಭಾರತೀಯ ಶರಣ ಸೇನಾ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮನುಷ್ಯನನ್ನು ಬದುಕಿಸುವುದೇ ನಿಜವಾದ ಧರ್ಮ. ಸೌಹಾರ್ದ ಮತ್ತು ಭಾವೈಕ್ಯವೇ ಭಾರತದ ಶಕ್ತಿ’ ಎಂದು ಹೇಳಿದರು.

‘ಯಾವ ಆಚರಣೆಗಳ ವಿರುದ್ಧ ಶರಣರು ಹೋರಾಡಿದರೋ, ಅದೇ ಆಚರಣೆಗಳಲ್ಲಿ ಶರಣರನ್ನು ಈಗ ಬಂಧಿಸಿಡಲಾಗಿದೆ. ವೈದಿಕ ಪುರೋಹಿತಶಾಹಿ ವ್ಯವಸ್ಥೆಯ ಸಂಚಿದು. ಬಸವಣ್ಣನನ್ನು ನೇಪಥ್ಯಕ್ಕೆ ಸರಿಸುವ ಜೊತೆಗೆ, ಬಸವ ಧರ್ಮವನ್ನು ಅದುಮಿಡಲು ಯತ್ನಿಸಿತು. ಇದನ್ನು ಅರಿಯದ ಲಿಂಗಾಯತರು ಇತ್ತೀಚೆಗೆ ನವಬ್ರಾಹ್ಮಣರಾಗುತ್ತಿರುವುದು ಅಪಾಯಕಾರಿ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸೇನಾದ ಸಂಚಾಲಕ ರವಿಕುಮಾರ ರಾಯಸಂದ್ರ, ಮುಸ್ಲಿಂ ಧರ್ಮಗುರು ಸೈಯದ್ ಶಾ ತಾಜುದ್ದೀನ್ ಖಾದರಿ, ಸಮತಾ ಸೈನಿಕ ದಳದ ಶಂಕರ ಅಜಮನಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಡಾ. ಅಬ್ದುಲ್ ಕರೀಂ, ಮಾಜಿ‌ ಸಂಸದ ಐ.ಜಿ.‌ ಸನದಿ‌, ವಿಜಯಪುರದ ಯರಗಲ್‌ನ ಡಾ. ಎಂ.ಎಂ.‌ ಕಲಬುರ್ಗಿ ವಿಚಾರ ವೇದಿಕೆಯ ಮಹಾಂತೇಶ ಎಂ.‌ ಕಲಬುರ್ಗಿ, ನಿವೃತ್ತ ಅಧಿಕಾರಿ ಹನುಮಾಕ್ಷಿ ಗೋಗಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಹಾನಗರ ಪಾಲಿಕೆ ಸದಸ್ಯ ಇಮ್ರಾನ್ ಎಲಿಗಾರ,ಕಾಂಗ್ರೆಸ್ ಮುಖಂಡ ಪ್ರಕಾಶ ಕ್ಯಾರಕಟ್ಟಿ, ಜಾಕೀರ್ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.