ಕುಂದಗೋಳ: ಮಳೆಗಾಲ ಬಂದರೆ ಸಾಕು ತಾಲ್ಲೂಕಿನ ಚಾಕಲಬ್ಬಿ ಗ್ರಾಮದ ರಸ್ತೆ ಸಂಚಾರ ಸ್ಥಗಿತವಾಗುತ್ತದೆ. ಪ್ರತಿವರ್ಷ ಗ್ರಾಮಸ್ಥರು ಪ್ರತಿಭಟನೆ, ಮನವಿ ಸಲ್ಲಿಸುವುದು ಸಾಮಾನ್ಯ. ಈಗ ಮಳೆಗಾಲ ಪ್ರಾರಂಭದಲ್ಲಿಯೇ ತಾಲ್ಲೂಕಿನ ಚಾಕಲಬ್ಬಿ–ಸಂಶಿ ಮಾರ್ಗ ಮಧ್ಯದ ರಸ್ತೆ ಮಳೆಗೆ ಕೊಚ್ಚಿಹೋಗಿ ಅಲ್ಪ ಪ್ರಮಾಣದಲ್ಲಿ ಮಾತ್ರ ರಸ್ತೆ ಉಳಿದಿರುವದರಿಂದ ಚಾಕಲಬ್ಬಿ ಗ್ರಾಮಕ್ಕೆ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ ಪರಿಸ್ಥಿತಿ ಕಂಡು ಬಂದಿತು.
ಈ ರಸ್ತೆ ಅಭಿವೃದ್ದಿಗೆ ಶಾಸಕರ ಕಾಳಜಿಯಿಂದ ₹ 6 ಕೋಟಿ ಅನುದಾನ ಬಿಡುಗಡೆ ಮಾಡಿ, ಭೂಮಿಪೂಜೆ ಮಾಡಿದರೂ ಕೆಲಸ ಪ್ರಾರಂಭವಾಗಿಲ್ಲ. ಚಾಕಲಬ್ಬಿ ಗ್ರಾಮದ ಜನತೆ ಹುಬ್ಬಳ್ಳಿ, ಕುಂದಗೋಳ, ಸಂಶಿ, ಲಕ್ಷ್ಮೇಶ್ವರ ಅನೇಕ ಕಡೆ ತಮ್ಮ ಕೆಲಸ ಕಾರ್ಯಗಳಿಗೆ ಶಾಲಾ-ಕಾಲೇಜಗಳಿಗೆ ತೆರಳಲು ಇದೇ ರಸ್ತೆ ಅವಲಂಬಿಸಿದ್ದು, ಶನಿವಾರ ಮಳೆಯಾಗಿದ್ದರಿಂದ ಲಾರಿಯೊಂದು ರಸ್ತೆ ಮಧ್ಯೆ ಸಿಲುಕಿ ಬಸ್ ಬರಲು ತೊಂದರೆಯಾಗಿ ಪ್ರಯಾಣಿಕರು ಪರದಾಡಿದರು.
ಪ್ರತಿ ವರ್ಷ ಮಳೆಗಾಲ ಬಂದರೆ ಚಾಕಲಬ್ಬಿ ಗ್ರಾಮದ ಸ್ಥಿತಿ ಹೀಗೆಯೇ ಆಗುತ್ತದೆ, ಕಳೆದ ವರ್ಷ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದರು. ಹೀಗೆ ಪ್ರತಿವರ್ಷದ ಸ್ಥಿತಿ ಶಾಸಕ ಎಂ.ಆರ್.ಪಾಟೀಲ ಮುತವರ್ಜಿ ವಹಿಸಿ ಜಿಲ್ಲಾ ಮುಖ್ಯ ರಸ್ತೆಯಡಿ ₹ 6 ಕೋಟಿ ಅನುದಾನ ತಂದು ಭೂಮಿಪೂಜೆ ಮಾಡಿ ತಿಂಗಳುಗಳೇ ಗತಿಸಿದರು ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೋ, ಗುತ್ತಿಗೆದಾರನ ಬೇಜವಾಬ್ದಾರಿಯೋ ಜನರಿಗೆ ಮಾತ್ರ ಗೋಳಾಟ ತಪ್ಪುತ್ತಿಲ್ಲ.
‘ಗ್ರಾಮ ಪಂಚಾಯಿತಿ ಸದಸ್ಯ ಈ ರಸ್ತೆಗೆ ವಿಶೇಷವಾಗಿ ಜಿಲ್ಲಾ ಮುಖ್ಯರಸ್ತೆಯಡಿ ₹ 6 ಕೋಟಿ ಅನುದಾನ ಬಿಡುಗಡೆಯಾಗಿ ಶಾಸಕರು ಸಹ ಬಂದು ಭೂಮಿಪೂಜೆ ನೆರೆವೇರಿಸಿ ಹೋಗಿದ್ದಾರೆ. ಗುತ್ತಿಗೆದಾರನಿಗೆ ಪೋನ್ ಮಾಡಿದರೆ. ಇಲ್ಲ ಸಲ್ಲದ ಸಬೂಬು ನೀಡುತ್ತಾನೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ತಿಳಿಸಿದರೆ. ಇವತ್ತು ಆರಂಭವಾಗುತ್ತದೆ. ನಾಳೆ ಆರಂಭವಾಗುತ್ತದೆ ಎಂದು ಆವರು ಸಹ ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಟೋಪಣ್ಣ ಕಟಗಿ ತಿಳಿಸಿದರು.
‘ಕಾಮಗಾರಿ ಚಾಲನೆ ಮಾಡಲು ಭೂಮಿಪೂಜೆ ನೆರವೇರಿಸಿ ಮೂರು ತಿಂಗಳು ಗತಿಸಿದರು. ಇನ್ನು ಕೆಲಸ ಆರಂಭವಾಗದಿರುವುದರಿಂದ ಮಳೆ ಬಂದರೆ ಸಾಕು ರಸ್ತೆ ಸಂಚಾರ ಬಂದಾಗುತ್ತದೆ. ಇವತ್ತು ಗ್ರಾಮಕ್ಕೆ ಬಸ್ ಬಾರದೇ ತೊಂದರೆಯಾಗಿದೆ. ಕೂಡಲೇ ಕೆಲಸ ಪ್ರಾರಂಭಿಸದಿದ್ದರೆ ಲೋಕೋಪಯೋಗಿ ಇಲಾಖೆಯ ಎದುರಿಗೆ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರ ಜೊತೆ ನಾವೇ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
‘ಬೇಸಿಗೆ ಕಾಲ ಮುಗಿಯುತ್ತಾ ಬಂದು ಶಾಲಾ-ಕಾಲೇಜು ಮೇ 29 ರಿಂದ ಆರಂಭವಾಗುತ್ತಿವೆ. ಪದೇಪದೇ ಈ ರಸ್ತೆಯಲ್ಲಿ ಹಾಳಾಗಿದ್ದರಿಂದ ಎಷ್ಟೋ ಬಾರಿ ಜೆಸಿಬಿಲಿಂದ ಮಣ್ಣು ಹಾಕಿ ತಾತ್ಕಾಲಿಕ ದಾರಿ ಮಾಡಿಕೊಟ್ಟಿದ್ದೇವೆ. ದೇವರು ವರ ಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲ ಎಂಬತೆ ಈ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಸಂಪರ್ಕಕ್ಕೆ ಸಿಗದೇ. ಕೆಲಸ ಆರಂಭಿಸದೇ ತೊಂದರೆ ಉಂಟು ಮಾಡುತ್ತಿದ್ದಾರೆ. ಗುತ್ತಿದಾರರನ್ನೇ ಬದಲಿಸಿ. ಹೀಗೆ ಮುಂದುವರೆದರೆ ಪ್ರತಿಭಟನೆ ಅನಿವಾರ್ಯ’ ಎಂದು ಹೇಳಿದರು.
ಮಳೆಯಿಂದ ರಸ್ತೆ ಮತ್ತಷ್ಟು ಹಾಳಾಗಿದೆ. ದುರಸ್ತಿಗೆ ಗುತ್ತಿಗೆದಾರರು ವಿಳಂಬ ಮಾಡುತ್ತಿರುವುದರಿಂದ ಈ ಭಾಗದ ಶಾಲಾ. ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆಇಬ್ರಾಹಿಂ ನದಾಫ್ ಚಾಕಲಬ್ಬಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.