ಹುಬ್ಬಳ್ಳಿ: ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು 19 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಸ್ಪರ್ಧಿಸುವ ಆಸಕ್ತರು ಅರ್ಜಿ ಸಲ್ಲಿಸುವಂತೆ ಕೆಪಿಸಿಸಿ ತಿಳಿಸಿತ್ತು. ಶಿವಳ್ಳಿ ಪತ್ನಿ ಕುಸುಮಾ ಮತ್ತು ಸಹೋದರ ಷಣ್ಮುಖ ಸೇರಿದಂತೆ ಒಟ್ಟು 19 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕರ ಮತ್ತು ಸಚಿವರ ಪುತ್ರರು ಕೂಡ ಬುಧವಾರ ಅರ್ಜಿ ಕೊಟ್ಟಿದ್ದಾರೆ.
‘ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಕೆಪಿಸಿಸಿಗೆ ವರದಿ ನೀಡಲಾಗುವುದು. ಗುರುವಾರ (ಏ. 25) ಮಧ್ಯಾಹ್ನ 12ಕ್ಕೆ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಟಿಕೆಟ್ ಯಾರಿಗೆ ಎಂಬುದು ಅಂತಿಮವಾಗಲಿದೆ’ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಧಾರವಾಡ ಜಿಲ್ಲಾ ಪಂಚಾಯ್ತಿ ಅದರಗುಂಚಿ ಸದಸ್ಯ ಸುರೇಶಗೌಡ ಪಾಟೀಲ, ಶಿವಾನಂದ ಬೆಂತೂರ, ಮಾಜಿ ಸಚಿವ ಎಂ.ಎಸ್. ಕಟಗಿ ಅವರ ಪುತ್ರ ಅರವಿಂದ ಕಟಗಿ, ಮಾಜಿ ಶಾಸಕರಾದ ಈರಪ್ಪ ಕೂಬಿಯಾಳ ಅವರ ಪುತ್ರ ವಿಶ್ವನಾಥ ಕೂಬಿಹಾಳ, ಗೋವಿಂದಪ್ಪ ಜುಟ್ಟಲ್ ಪುತ್ರ ಚಂದ್ರಶೇಖರ ಜುಟ್ಟಲ್, ಮಾಜಿ ಶಾಸಕ ಬಸಪ್ಪ ಉಪ್ಪಿನ ಅವರ ಮಗ ಅಂದಾನಪ್ಪ ಉಪ್ಪಿನ ಮತ್ತು ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನನೌಡ್ರ ಅರ್ಜಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.