ADVERTISEMENT

ವೃದ್ದೆಯ ಕೆನ್ನೆಗೆ ಹೊಡೆದ ಬಸ್‌ ನಿರ್ವಾಹಕಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 22:47 IST
Last Updated 23 ಜೂನ್ 2023, 22:47 IST
   

ಹುಬ್ಬಳ್ಳಿ: ಕುಂದಗೋಳದಿಂದ ಹುಬ್ಬಳ್ಳಿಗೆ ಶುಕ್ರವಾರ ಬೆಳಿಗ್ಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ವೃದ್ಧೆಯೊಬ್ಬರಿಗೆ ನಿರ್ವಾಹಕಿಯೊಬ್ಬರು ಕಪಾಳಕ್ಕೆ ಹೊಡೆದಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್‌ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 

ಬೆಳಿಗ್ಗೆ 7.30ರ ಸುಮಾರಿಗೆ ಬಸ್‌ ಶೆರೆವಾಡ ಬಳಿ ಬಂದಾಗ ಎಲ್ಲ ಪ್ರಯಾಣಿಕರಿಗೆ ಟಿಕೆಟ್‌ ಕೊಡಲು ಬಸ್‌ ನಿಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿದ ವೃದ್ಧೆ, ನಿರ್ವಾಹಕಿಯ ಜೊತೆ ವಾಗ್ವಾದ ನಡೆಸಿದರು. ತಮಗೆ ಬೇಗ ಹುಬ್ಬಳ್ಳಿಗೆ ಹೋಗಬೇಕಿದೆ. ಇಲ್ಲೇಕೆ ನಿಲ್ಲಿಸಿದೀರಿ ಎಂದು ಜಗಳ ಆರಂಭಿಸಿದರು. ಅವಾಚ್ಯ ಪದಗಳಿಂದ ನಿಂದಿಸಿದರು. ಮಾತಿಗೆ ಮಾತು ಬೆಳೆದಾಗ ತಾಳ್ಮೆ ಕಳೆದುಕೊಂಡ ನಿರ್ವಾಹಕಿ ಕಪಾಳಮೋಕ್ಷ ಮಾಡಿದರು.

ಕಾರಣ ಕೇಳಿ ನೋಟಿಸ್‌: ‘ಪ್ರಕರಣ ಗಮನಕ್ಕೆ ಬಂದಿದೆ. ಶಕ್ತಿ ಯೋಜನೆಯಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಮುಂದಿನ ನಿಲುಗಡೆ ಬರುವುದರೊಳಗೆ ಪ್ರಯಾಣಿಕರಿಗೆ ಟಿಕೆಟ್‌ ಕೊಡುವ ಒತ್ತಡ ನಿರ್ವಾಹಕರ ಮೇಲಿದೆ. ಆದರೂ ತಾಳ್ಮೆ ಕಾಯ್ದುಕೊಳ್ಳಬೇಕು. ನಿರ್ವಾಹಕಿಗೆ ಕಾರಣ ಕೇಳಿ ನೋಟಿಸ್‌ ಕೊಡಲಾಗುವುದು’ ಎಂದು ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮನಗೌಡರ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.