ADVERTISEMENT

ಕೆಆರ್‌ಡಿಎಸ್‌ಎಸ್‌ನಿಂದ ನಾಗವಾರ ಉಚ್ಚಾಟನೆ

ಸಂಘಟನಾ ವಿರೋಧಿ ಚಟುವಟಿಕೆ ನಡೆಸಿದ ಆರೋಪ: ಶಿವಾಜಿ ಬನವಾಸಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 16:37 IST
Last Updated 12 ಫೆಬ್ರುವರಿ 2022, 16:37 IST

ಹುಬ್ಬಳ್ಳಿ: ‘ಸಂಘಟನಾ ವಿರೋಧಿ ಚಟುವಟಿಕೆ ಹಾಗೂ ಗುಂಪುಗಾರಿಕೆ ನಡೆಸಿದ ಕಾರಣಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ’ ಎಂದು ಸಮಿತಿಯ ಕಾರವಾರ ಜಿಲ್ಲಾ ಸಂಚಾಲಕ ಶಿವಾಜಿ ಬನವಾಸಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಮಿತಿಗೂ, ನಾಗವಾರ ಅವರಿಗೂ ಇನ್ನು ಮುಂದೆ ಯಾವುದೇ ಸಂಬಂಧ ಇರುವುದಿಲ್ಲ’ ಎಂದು ಹೇಳಿದರು.

‘ನಾಗವಾರ, 18 ವರ್ಷಗಳಿಂದ ಸರ್ವ ಸದಸ್ಯರ ಸಭೆ ನಡೆಸದೆ, ತಮ್ಮ ಹುದ್ದೆಯನ್ನು ಬೇರೆಯವರಿಗೂ ಬಿಟ್ಟುಕೊಡದೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪ್ರತಿವರ್ಷ ಅಧ್ಯಯನ ಶಿಬಿರ ನಡೆಸುವ ನೆಪದಲ್ಲಿ ಹಣ ಸಂಗ್ರಹಿಸಿದ್ದು, ಈ ಕುರಿತ ಲೆಕ್ಕಪತ್ರವನ್ನು ಸಮಿತಿಗೆ ಸಲ್ಲಿಸಿಲ್ಲ. ಬೈಲಾದಂತೆ ಆಂತರಿಕ ಶಿಸ್ತು ಮತ್ತು ಸಂಘಟನಾ ಸಂಚಾಲಕರು ಸಭೆ ಕರೆಯಲು ಅವಕಾಶ ನೀಡದೆ ಸರ್ವಾಧಿಕಾಯಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಈ ಕುರಿತು ಅವರನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನೂ ಒಳಗೊಂಡು ಮೈಸೂರು ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ, ರಾಜ್ಯ ಸಂಘಟನಾ ಸಂಚಾಲಕ ಕಲ್ಲಪ್ಪ ಕಾಂಬ್ಳೆ ಅವರನ್ನು ಉಚ್ಚಾಟಿಸಿದ್ದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಉಚ್ಚಾಟನೆ ಘೋಷಣೆಗೂ ಮುನ್ನ ಫೆ.12ರಂದು ರಾಜ್ಯ ಸಮಿತಿ ಸಭೆ ನಡೆಸುವ ತೀರ್ಮಾನ ಮಾಡಲಾಗಿತ್ತು. ಅದರಂತೆ ಸಭೆ ನಡೆಸಿ, ಜಿಲ್ಲಾ ಮಟ್ಟದ ಸಂಚಾಲಕರ ಸಮ್ಮತಿಯೊಂದಿಗೆ ನಾಗವಾರ ಸೇರಿದಂತೆ ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ಆರ್‌. ವೆಂಕಟೇಶ, ಬೆಳಗಾವಿ ವಿಭಾಗೀಯ ಸಂಚಾಲಕ ಎಫ್‌.ವೈ. ದೊಡ್ಡಮನಿ ಅವರನ್ನು ಉಚ್ಚಾಟನೆ ಮಾಡಲಾಗಿದೆ’ ಎಂದರು.

‘ಸಮಿತಿ ಸಭೆಗಳಿಗೆ ಹಾಜರಾಗದ ಕಾರಣಕ್ಕೆ ನಮ್ಮನ್ನು ಉಚ್ಚಾಟಿಸಿದ್ದಾಗಿ ಹೇಳಿದ್ದಾರೆ. ಈ ಕುರಿತು ನಮಗೆ ನೋಟಿಸ್‌ ನೀಡಿದ್ದರೆ ತೋರಿಸಲಿ. ಅವರು ತಮ್ಮ ತಪ್ಪು ಒಪ್ಪಿಕೊಂಡು, ಸಮಿತಿ ಬಲಗೊಳಿಸಲು ಮುಂದಾದರೆ ಬೆಂಬಲ ನೀಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ದೇವಗಳ್ಳಿ ಸೋಮಶೇಖರ, ಕಲ್ಲಪ್ಪ ಕಾಂಬ್ಳೆ, ರಾಜು, ಬಸವರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.