ADVERTISEMENT

ಉಪಜಾತಿ ಬಿಡಿ, ಬ್ರಾಹ್ಮಣತ್ವ ಬೆಳಸಿ: ಸಚ್ಚಿದಾನಂದ ಮೂರ್ತಿ

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 15:59 IST
Last Updated 1 ಸೆಪ್ಟೆಂಬರ್ 2020, 15:59 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿದರು   

ಹುಬ್ಬಳ್ಳಿ: ’ಚುನಾವಣೆಯಲ್ಲಿ ಬ್ರಾಹ್ಮಣ ಮತದಾರರು ನಿರ್ಣಾಯಕರಾಗಿದ್ದರೂ, ದಾಖಲೆಗಳಲ್ಲಿ ಉಪಜಾತಿಗಳನ್ನು ನಮೂದಿಸುತ್ತಿದ್ದಾರೆ. ಇದರಿಂದ ಸಮಾಜದ ಏಳಿಗೆಯಾಗುತ್ತಿಲ್ಲ. ಈ ಕಾರಣಕ್ಕಾಗಿ ಉಪಜಾತಿಗಳನ್ನು ಬಿಟ್ಟು ಬ್ರಾಹ್ಮಣತ್ವವನ್ನು ಬೆಳಸಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕರೆ ನೀಡಿದರು.

ಮಂಗಳವಾರ ಕೃಷ್ಣ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣ ಸಮಾಜದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ’ನಿಮ್ಮ ಮಕ್ಕಳಿಗೆ ಮದುವೆ ಮಾಡುವಾಗ ಉಪಜಾತಿಗಳ ಬಗ್ಗೆ ಯೋಚಿಸಿ, ರಾಜ್ಯದಲ್ಲಿ ಬ್ರಾಹ್ಮಣತ್ವ ಉಳಿಯಬೇಕಾದರೆ ಎಲ್ಲರೂ ಒಂದಾಗಲೇಬೇಕು. ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಕಾರ್ಯ ಮುಗಿದ ಬಳಿಕ ಜಾತಿಗಣತಿ ಮಾಡಲಾಗುವುದು’ ಎಂದರು.

’ಪುರೋಹಿತರನ್ನು ಮದುವೆಯಾಗುವ ಸಮಾಜದ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿದವರ ಬದುಕಿಗೆ ನೆರವಾಗಲು ಕೌಶಲ ತರಬೇತಿ ನೀಡಲಾಗುವುದು. ಶಿಕ್ಷಣಕ್ಕೆ ಒತ್ತು ಕೊಡಲು ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

ADVERTISEMENT

ಮಂಡಳಿ ನಿರ್ದೇಶಕ ಎಂ.ಬಿ. ನಾತು ಪ್ರಾಸ್ತಾವಿಕವಾಗಿ ಮಾತನಾಡಿ ’ರಾಜ್ಯ ಸರ್ಕಾರ ಬ್ರಾಹ್ಮಣರಿಗೆ ಶಿಕ್ಷಣ ಹಾಗೂ ನೌಕರಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಾರೆ. ಆದರೆ, ಕಡಿಮೆ ಅಂಕ ಪಡೆದವರು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯಿರುತ್ತದೆ. ಆದ್ದರಿಂದ ಮಂಡಳಿಯಿಂದ ಅವರಿಗೂ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು. ಸೌಲಭ್ಯಗಳ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಬಾರದು’ ಎಂದು ಮನವಿ ಮಾಡಿದರು.

ಮಂಡಳಿ ನಿರ್ದೇಶಕರಾದ ಸುಬ್ರಾಯ ಹೆಗಡೆ, ಗುರುರಾಜ ಕಟ್ಟಿ ಮಾತನಾಡಿದರು. ಸಮಾಜದ ಪ್ರಮುಖರಾದ ಅನಂತರಾಜ ಭಟ್ಟ, ಶ್ರೀಕಾಂತ ಕೆಮ್ತೂರು, ಗೋವಿಂದ ಜೋಶಿ, ಎ.ಸಿ. ಗೋಪಾಲ, ಗುರುರಾಜ ಕಟ್ಟಿ, ಆರ್‌.ವಿ. ಕುಲಕರ್ಣಿ, ಮನೋಹರ ಪರ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.