ADVERTISEMENT

ರೈತ ಆತ್ಮಹತ್ಯೆ ಪ್ರಕರಣ, ಕೃಷಿ ಅಭಿವೃದ್ಧಿ ಕುರಿತ ಸಭೆ ಸಂತೋಷ ಲಾಡ್‌ ಸಭೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:17 IST
Last Updated 15 ಜುಲೈ 2025, 7:17 IST
ಧಾರವಾಡದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಚಿವ ಸಂತೋಷ ಲಾಡ್‌ ಮಾತನಾಡಿದರು
ಧಾರವಾಡದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಚಿವ ಸಂತೋಷ ಲಾಡ್‌ ಮಾತನಾಡಿದರು   

ಧಾರವಾಡ: ‘ಸರ್ಕಾರವು ವಿವಿಧ ‘ಸ್ಕೀಂ’ನಡಿ (ಸಹಾಯಧನ, ವೃದ್ಧಾಪ್ಯ, ವಿಧವಾ ವೇತನ, ಕಿಸಾನ್‌ ಸಮ್ಮಾನ್‌...) ಫಲಾನುಭವಿಗಳಿಗೆ ನೀಡುವ ಹಣವನ್ನು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು’ ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ನೀಡಿದರು.

ರೈತ ಆತ್ಮಹತ್ಯೆ ಪ್ರಕರಣಗಳು ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ಮತನಾಡಿದರು.

‘ಫಲಾನುಭವಿಗೆ ಸರ್ಕಾರ ನೀಡುವ ಹಣವನ್ನು ಸಾಲಕ್ಕೆ ಪಾವತಿಸಿಕೊಳ್ಳಲು ಅವಕಾಶ ಇಲ್ಲ. ವಸೂಲಿಯಾಗದ ಸಾಲ (ಎನ್‌ಪಿಎ) ಖಾತೆಯಾಗಿದ್ದರೂ ವರ್ಗಾಯಿಸಿಕೊಳ್ಳಲು ಅವಕಾಶ ಇಲ್ಲ. ಬ್ಯಾಂಕ್‌ಗಳು ತಕ್ಷಣವೇ ಈ ಕ್ರಮವನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಬ್ಯಾಂಕ್‌ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನಿಡಿದರು.

ADVERTISEMENT

‘ಕೋರ್‌ ಬ್ಯಾಂಕಿಂಗ್‌’ ವ್ಯವಸ್ಥೆಯಡಿ ಖಾತೆಯಿಂದ ಹಣ ಸಾಲಕ್ಕೆ ಜಮೆಯಾಗುತ್ತದೆ. ವಿಷಯವನ್ನು ಬ್ಯಾಂಕ್‌ನ ಉನ್ನತಾಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಜಿಲ್ಲೆಯ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಸವರಾಜು ತಿಳಿಸಿದರು.

ಸಾಲ (ಬೆಳೆ ಸಾಲ) ಪಡೆಯಲು ವಂಶವೃಕ್ಷ ದಾಖಲೆ ತರಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನವರು (ಕೆವಿಜಿಬಿ) ಸೂಚಿಸಿರುವುದು ಸರಿಯಲ್ಲ. ಸಾಲ ನೀಡಲು ವಂಶವೃಕ್ಷ ಯಾಕೆ ಬೇಕು? ಎಂದು ಲಾಡ್‌ ಪ್ರಶ್ನಿಸಿದರು.

‘ಕೆವಿಜಿಬಿ ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್‌ (ಕೆಜಿಬಿ) ಜತೆ ವಿಲೀನಗೊಂಡಿದೆ. ಕೆಜಿಬಿ ಸಾಲ ನೀಡಲು ವಂಶವೃಕ್ಷ ದಾಖಲೆ ಪಡೆಯುತ್ತಿತ್ತು, ಅದನ್ನು ‌ಪಾಲನೆ ಮಾಡಿದ್ದೇವು, ಈಗ ಕೈಬಿಡುತ್ತೇವೆ’ ಎಂದು ಕೆಜಿಬಿ ಅಧಿಕಾರಿ ಸಭೆಗೆ ತಿಳಿಸಿದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಬ್ಯಾಂಕ್‌ನವರು ಸಾಲಗಾರ ರೈತರ ಮನೆಗೆ ಭೇಟಿ ನೀಡಿ, ಸಾಲ ಮರುಪಾವತಿಸುವಂತೆ ಕಿರುಕುಳ ನೀಡಿದ ದೂರುಗಳು ಇವೆ. ಸಾಲ ಮರುಪಾವತಿಸಲು ಸಾಲಗಾರ, ಸುಸ್ತಿದಾರಗೆ ಕಾಲಾವಕಾಶ ನೀಡುವಂತೆ ಕೆಲವು ಪ್ರಕರಣಗಳಲ್ಲಿ ಖುದ್ದು ಬ್ಯಾಂಕ್ ಸಿಬ್ಬಂದಿಗೆ ಫೋನ್‌ ಮಾಡಿ ತಿಳಿಸಿದ್ದೆನೆ. ಬ್ಯಾಂಕ್‌ನವರು ಸಾಲ ಮರುಪಾವತಿಗೆ ರೈತರಿಗೆ ಒತ್ತಡ ಹೇರಬಾರದು’ ಎಂದು ತಿಳಿಸಿದರು.

‘ಬೆಳೆ ವಿಮೆಗೆ ಸಂಬಂಧಿಸಿದಂತೆ ಬೆಳೆ ಕಟಾವು ಪ್ರಯೋಗಕ್ಕೆ ಅನುಸರಿಸುವ ವಿಧಾನ ಸಮಗ್ರ ಮಾಹಿತಿ ಕರಪತ್ರ ಮುದ್ರಿಸಬೇಕು. ಎಲ್ಲ ರೈತರಿಗೆ, ಜನಪ್ರತಿನಿಧಿಗಳಿಗೆ, ಮಾಜಿ ಜನಪ್ರತಿನಿಧಿಗಳಿಗೆ ನೀಡಬೇಕು’ ಎಂದು ಸಚಿವ ಲಾಡ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಮೈಕ್ರೋ ಫೈನಾನ್ಸ್‌ಗಳವರ ಸಭೆ ಆಯೋಜಿಸಬೇಕು. ವಸೂಲಿ ವಿಧಾನ ಇತ್ಯಾದಿ ಕುರಿತು ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗೆ ಲಾಡ್‌ ನಿರ್ದೇಶನ ನೀಡಿದರು.

ಕುಂದಗೋಳ ತಾಲ್ಲೂಕಿನ ಭರದ್ವಾಡ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಅವರಿಬ್ಬರು ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ಬಗ್ಗೆ ಕುಟುಂಬದವರು ತಿಳಿಸಿದ್ಧಾರೆ. ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಸಾಲ ಮರುಪಾವತಿಗೆ ಕಿರುಕುಳ ನೀಡಬಾರದು. ಬ್ಯಾಂಕ್‌ ಸಿಬ್ಬಂದಿ ಕನ್ನಡ ಕಲಿಯಬೇಕು. ರೈತರು, ಗ್ರಾಹಕರೊಂದಿಗೆ ಕನ್ನಡದಲ್ಲಿ ಸಂವಹನ ಮಾಡಬೇಕು ಎಂದು ಲಾಡ್‌ ತಿಳಿಸಿದರು.

ಹು–ಧಾ ಮಹಾನಗರ ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಗೋಪಾಲ ಎಂ. ಬ್ಯಾಕೋಡ್ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ ಇದ್ದರು.

ಜಿಲ್ಲೆಯಲ್ಲಿ 50 ಸಾವಿರ ಎನ್‌ಪಿಎ ಖಾತೆಗಳಿವೆ. ಎನ್‌ಪಿಎ ಸಾಲ ಖಾತೆಗಳ ಕುರಿತು ಕೃಷಿ ವಿಶ್ವವಿದ್ಯಾಲಯದವರ ಜತೆಗೂಡಿ ಅಧ್ಯಯನ ಮಾಡಲಾಗುವುದು. ಕಾರಣಗಳನ್ನು ತಿಳಿದು ಪರಿಹಾರಕ್ಕೆ ಕ್ರಮ ವಹಿಸಲಾಗುವುದು

-ಸಂತೋಷ್‌ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವ

‘52 ರೈತ ಆತ್ಮಹತ್ಯೆ ಪ‍್ರಕರಣ’

2024–25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 52 ರೈತ ಆತ್ಮಹತ್ಯೆ ಪ್ರಕರಣಗಳಾಗಿವೆ. ಈ ಪೈಕಿ 47 ಪ‍್ರಕರಣಗಳಿಗೆ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ಜಿಲ್ಲೆಯಲ್ಲಿ 2020–21ರಲ್ಲಿ 64 2021–22ರಲ್ಲಿ 55 2022–23ರಲ್ಲಿ 64 2023–24ರಲ್ಲಿ 79 ಹಾಗೂ 2024–25ರಲ್ಲಿ 52 ಒಟ್ಟು 314 ರೈತ ಆತ್ಯಹತ್ಯೆ ಪ್ರಕರಣಗಳಾಗಿವೆ. ನವಲಗುಂದ ತಾಲ್ಲೂಕಿನಲ್ಲಿ ಅತಿ ಹೆಚ್ಚು 77 ಪ್ರಕರಣಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.