ಧಾರವಾಡ:ಕರ್ನಾಟಕ ಕುಸ್ತಿಹಬ್ಬದ ಕೊನೆಯ ದಿನವಾದ ಮಂಗಳವಾರ ದೇಶದ ಪ್ರಮುಖ ಕುಸ್ತಿಪಟುಗಳು ಮತ್ತು ವಿದೇಶಿ ಪೈಲ್ವಾನರು ಅಖಾಡಕ್ಕೆ ಇಳಿಯಲಿದ್ದಾರೆ.
ಅದರಲ್ಲಿ ಅಂತರರಾಷ್ಟ್ರೀಯ ಪೈಲ್ವಾನ್ ಧಾರವಾಡ ತಾಲ್ಲೂಕಿನ ಸಿಂಗನಹಳ್ಳಿಯ ರಫೀಕ್ ಹೊಳಿ ಪ್ರಮುಖವಾದವರು. ತವರೂರ ಹುಡುಗನ ‘ದಂಗಲ್’ ನೋಡಲು ಕುಸ್ತಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ರಫೀಕ್ ಹೊಳಿ ವಿಶ್ವ ಚಾಂಪಿಯನ್ಷಿಪ್, 2016ರ ಕಾಮನ್ವೆಲ್ತ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ತವರೂರಿನ ಕುಸ್ತಿ ಅಭಿಮಾನಿಗಳ ಎದುರು ಪ್ರಶಸ್ತಿ ಗೆಲ್ಲಬೇಕೆನ್ನುವ ಛಲದಲ್ಲಿ ರಫೀಕ್ ಸಿಂಗನಹಳ್ಳಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಪುಣೆಯಲ್ಲಿ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಂಗಳವಾರ ನಡೆಯುವ ಪಂದ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಫೀಕ್ ‘ಮುಂದಿನ ದಿನಗಳಲ್ಲಿ ವಿಶ್ವ ಚಾಂಪಿಯನ್ಷಿಪ್ ಮತ್ತು ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಪಂದ್ಯಗಳಿವೆ. ಆದ್ದರಿಂದ ಇಲ್ಲಿನ ಕುಸ್ತಿ ಬಹುಮುಖ್ಯವಾದದ್ದು. ಇದೇ ವರ್ಷ ಟೋಕಿಯೊ ಒಲಿಂಪಿಕ್ಸ್ ಇದೆ; ಸದ್ಯಕ್ಕೆ ನನ್ನ ಪಾಲಿಗೆ ಧಾರವಾಡದ ಕುಸ್ತಿ ಹಬ್ಬವೇ ಒಲಿಂಪಿಕ್ಸ್. ಈ ಸವಾಲನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದರು.
ಗಣ್ಯರ ದಂಡು: ಕುಸ್ತಿಹಬ್ಬದಲ್ಲಿ ಸೋಮವಾರ ದೇಶದ ಹೆಸರಾಂತ ಕುಸ್ತಿಪಟುಗಳಾದ ಪಂಜಾಬಿನ ನಿವೃತ್ತ ಐಜಿಪಿ ಕರ್ತಾರ್ ಸಿಂಗ್, ಸುಭಾಸ್ ಮಲಿಕ್, ಧರ್ಮೇಂದ್ರ ಸಿಂಗ್ ಪಂದ್ಯಗಳನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.