ಹುಬ್ಬಳ್ಳಿ: ‘ರಾಜ್ಯ ಸರ್ಕಾರಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ತೆರವಿಗೆ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ, ರಾಜ್ಯದ ಸುಮಾರು ಒಂದು ಸಾವಿರ ದೇವಸ್ಥಾನಗಳಲ್ಲಿ ಬೆಳಿಗ್ಗೆ 5ರಿಂದ 9ರವರೆಗೆ ಸುಪ್ರಭಾತವನ್ನು ಜೋರಾಗಿ ಹಾಕುವ ಮೂಲಕ ಪ್ರತಿಭಟಿಸಲಾಗುವುದು’ ಎಂದು ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
‘ಶಬ್ದ ಮಾಲಿನ್ಯ ಉಂಟುಮಾಡುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್ಗಳ ಮೇಲೆ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋಟ್೯ ಮತ್ತು ಹೈಕೋರ್ಟ್ ಈಗಾಗಲೇ ಆದೇಶ ನೀಡಿವೆ. ಆದರೆ, ಸರ್ಕಾರಗಳು ಈ ಆದೇಶವನ್ನು ಜಾರಿಗೊಳಿಸದೆ ನಿರ್ಲಕ್ಷ್ಯ ತೋರಿವೆ. ಸರ್ಕಾರ ಇನ್ನಾದರೂ ತೆರವಿಗೆ ಕ್ರಮ ತೆಗೆಕೊಳ್ಳಬೇಕು. ಇಲ್ಲದಿದ್ದರೆ, ಸೇನೆಯ ಕಾರ್ಯಕರ್ತರೇ ಮಸೀದಿಯ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸುತ್ತಾರೆ’ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಧ್ವನಿವರ್ಧಕಗಳ ತೆರವಿಗಾಗಿ ಶ್ರೀರಾಮ ಸೇನೆ ಕಳೆದು ಆರು ತಿಂಗಳಿನಿಂದ ವಿವಿಧ ಹೋರಾಟ ಮಾಡುವ ಮೂಲಕ ಸರ್ಕಾರ ಗಮನ ಸೆಳೆದಿದೆ. ಇಷ್ಟಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮಪ್ರತಿಭಟನೆ ತಡೆಯಲು ಪೊಲೀಸರು ಮುಂದಾದರೆ, ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದೇವಟಗಿ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ದುರ್ಗಾದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.