ಹುಬ್ಬಳ್ಳಿ: ‘ಅಹಿಂಸಾ ಪರಮೋ ಧರ್ಮ’ ಎಂದು ಸಾರಿದ ಭಗವಾನ್ ಮಹಾವೀರ ಅವರ ಜಯಂತಿಯನ್ನು ಜೈನ ಸಮುದಾಯದವರು ಗುರುವಾರ ಸಂಭ್ರಮದಿಂದ ಆಚರಿಸಿದರು. ಪಲ್ಲಕ್ಕಿಯಲ್ಲಿ ಮಹಾವೀರ ಮೂರ್ತಿ ಮತ್ತು ಚಿತ್ರದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಡಗರದಿಂದ ನಡೆಯಿತು.
ಜಯಂತಿ ಅಂಗವಾಗಿ ನಗರದ ಮಹಾವೀರ ಗಲ್ಲಿ, ಕಂಚಗಾರ ಗಲ್ಲಿ, ಮರಾಠ ಗಲ್ಲಿ, ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ಇರುವ ಜೈನ ಮಂದಿರಗಳಲ್ಲಿ ಬೆಳಿಗ್ಗೆ 6ಕ್ಕೆ ಪಂಚಾಮೃತ ಪೂಜೆ ಹಾಗೂ ಮಹಾವೀರ ತೀರ್ಥಂಕರರ ತೊಟ್ಟಿಲೋತ್ಸವ ಜರುಗಿತು. ಕಂಚಗಾರ ಗಲ್ಲಿಯಲ್ಲಿರುವ ಜೈನ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆಯು ಸುತ್ತಮುತ್ತಲಿನ ಪ್ರದೇಶಗಳ ಪ್ರಮುಖ ಬೀದಿಗಳಲ್ಲಿ ಸಾಗಿತು.
ಹಳೇ ಹುಬ್ಬಳ್ಳಿಯ ಅಹಿಂಸಾ ವೃತ್ತದಲ್ಲಿ ಹುಬ್ಬಳ್ಳಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ ಅವರು ಧರ್ಮದ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆ ಶಾಂತಿನಾಥ ಗಲ್ಲಿಯಲ್ಲಿ ಸಮಾರೋಪಗೊಂಡಿತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮಹಾವೀರ ಗಲ್ಲಿಯ ಶಾಂತಿನಾಥ ಮಂದಿರದ ಬಳಿ ಕೇಂದ್ರ ಪ್ರಲ್ಹಾದ ಜೋಶಿ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರು ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು.ಸಮುದಾಯದ ಮಹಿಳೆಯರು, ಹಿರಿಯರು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
ಮಿನಿ ವಿಧಾನಸೌಧ:
ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ತಹಶೀಲ್ದಾರ್ ಸಂತೋಷ ಹಿರೇಮಠ ಅವರು ಮಹಾವೀರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ ಇದ್ದರು.
ಸಮಾಜದ ಉಪಾಧ್ಯಕ್ಷರಾದ ವಿಮಲ್ ತಾಳಿಕೋಟಿ, ಕಾರ್ಯದರ್ಶಿ ಆರ್.ಟಿ. ತವನಪ್ಪನವರ, ಖಜಾಂಚಿ ಸಂತೋಷ ಮುರಗಿಪಾಟೀಲ, ಸಹ ಖಜಾಂಚಿ ರಾಜೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.