ADVERTISEMENT

ಮೆಕ್ಕೆಜೋಳ: ಆರಂಭವಾಗದ ಖರೀದಿ ಕೇಂದ್ರ; ರೈತರ ಆತಂಕ

ಮೆಕ್ಕೆಜೋಳ: ಉತ್ತಮ ಮಳೆಯಿಂದಾಗಿ ಒಳ್ಳೆಯ ಫಸಲು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:59 IST
Last Updated 16 ಡಿಸೆಂಬರ್ 2025, 2:59 IST
ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ಒಕ್ಕಲು ಮಾಡಲು ರಾಶಿ ಹಾಕಿರುವ ಮೆಕ್ಕೆಜೋಳ
ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ಒಕ್ಕಲು ಮಾಡಲು ರಾಶಿ ಹಾಕಿರುವ ಮೆಕ್ಕೆಜೋಳ   

ಗುಡಗೇರಿ: ಮೂರು–ನಾಲ್ಕು ವರ್ಷಗಳಿಂದ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಸಾಂಪ್ರದಾಯಿಕ ಬೆಳೆ ಬಿಟ್ಟು ಈ ಬಾರಿ ರೈತರು ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ, ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳ ಆರಂಭಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕುಂದಗೋಳ ತಾಲ್ಲೂಕಿನ ಗುಡಗೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಮೆಣಸಿನಕಾಯಿ, ಹತ್ತಿ ಬೆಳೆ ಕ್ಷೇತ್ರ ಶೇ 80ರಷ್ಟು ಕಡಿಮೆ ಮಾಡಿ, ಆ ಪ್ರದೇಶಗಳಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಅತಿಯಾದ ಮಳೆಯಿಂದಾಗಿ ಬೆಳೆಯೂ ಉತ್ತಮವಾಗಿ ಬಂದಿದೆ. ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತರಿಗೆ ಕೈಗೆ ಬಂದ ತುತ್ತು, ಬಾಯಿಗೆ ಬರದಂತಾಗಿದೆ.

ಸರ್ಕಾರ ₹2,400ರ ದರದಲ್ಲಿ ಖರೀದಿ ಕೇಂದ್ರ ಮೂಲಕ ಪ್ರತಿ ರೈತರಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಘೋಷಿಸಿದೆ. ಆದರೆ ಈವರೆಗೂ ಕುಂದುಗೋಳ ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ಆರಂಭವಾಗದೆ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

‘ಕಳೆದ ವರ್ಷ ಅತಿ ಮಳೆಯಿಂದಾಗಿ ಮೆಣಸಿನಕಾಯಿ, ಹತ್ತಿ ಬೆಳೆ ಸಂಪೂರ್ಣ ಹಾಳಾಗಿತ್ತು. ಈ ಬಾರಿ ರೈತರು ಮೆಕ್ಕೆಜೋಳ ಬೆಳೆದಿದ್ದು ದರ ಕುಸಿತದಿಂದ ನಷ್ಟವಾಗುತ್ತಿದೆ. ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಗುಡಗೇರಿ ಗ್ರಾಮದ ರೈತ ಮಂಜುನಾಥ ಅಣ್ಣಿಗೇರಿ ಒತ್ತಾಯಿಸಿದರು.

‘ಉತ್ತಮ ಬೆಳೆ ಬಂದಾಗ ದರ ಕುಸಿದಿದೆ. ಖರೀದಿ ಕೇಂದ್ರ ಆರಂಭವಾಗದ ಕಾರಣ ಮೆಕ್ಕೆಜೋಳ ರಾಶಿ ಒಕ್ಕಲು ಮಾಡದಂತಾಗಿದೆ’ ಎಂದು ಕಳಸ ಗ್ರಾಮದ ರೈತ ಮುತ್ತು ಮೂಲಿಮನಿ ಅಳಲು ತೋಡಿಕೊಂಡರು.

ಸಾಲ ಮಾಡಿ ಬೆಳೆದ ಮೆಕ್ಕೆಜೋಳವು ಹಾಳಾಗುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಖರೀದಿ ಕೇಂದ್ರ ಆರಂಭಿಸುವರೇ ಎಂದು ರೈತರು ಕಾಯುತ್ತ ಕೂರುವಂತಾಗಿದೆ.

ಮೆಕ್ಕೆಜೋಳ ಕ್ಷೇತ್ರ ಶೇ 80ರಷ್ಟು ಹೆಚ್ಚಳ ಮಾರುಕಟ್ಟೆಯಲ್ಲಿ ದರ ಕುಸಿತ ತಕ್ಷಣ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

ಕುಂದಗೋಳ ತಾಲ್ಲೂಕಿನ ಕಳಸ ಸಂಶಿ ಕುಂದಗೋಳ ಕೂಬಿಹಾಳ ಯಲಿವಾಳ ಗ್ರಾಮಗಳಲ್ಲಿ ಖರೀದಿ ಕೇಂದ್ರಕ್ಕೆ ಗುರುತಿಸಿದ್ದು ಸರ್ಕಾರ ಆದೇಶ ಬಂದ ಬಳಿಕ ಆರಂಭಿಸಲಾಗುವುದು
ರಾಜು ಮಾವರಕರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.