ADVERTISEMENT

ಮಜೇಥಿಯಾ ಫೌಂಡೇಷನ್‌–ಕಿಮ್ಸ್‌ ಒಪ್ಪಂದ

ನಮ್ಮ ಸಹಾಯ ನಿಮಗೆ ಬೇಕೆ? ಸಹಾಯವಾಣಿ ತಂಡ ಇಂದಿನಿಂದ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 14:46 IST
Last Updated 2 ನವೆಂಬರ್ 2020, 14:46 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಿಮ್ಸ್‌ ಸೇವೆಗೆ ಪ್ರಮಾಣವಚನ ಸ್ವೀಕರಿಸಿದ ಮಜೇಥಿಯಾ ಫೌಂಡೇಷನ್‌ ಸಿಬ್ಬಂದಿ. ಅತಿಥಿಗಳು ಇದ್ದಾರೆ
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಿಮ್ಸ್‌ ಸೇವೆಗೆ ಪ್ರಮಾಣವಚನ ಸ್ವೀಕರಿಸಿದ ಮಜೇಥಿಯಾ ಫೌಂಡೇಷನ್‌ ಸಿಬ್ಬಂದಿ. ಅತಿಥಿಗಳು ಇದ್ದಾರೆ   

ಹುಬ್ಬಳ್ಳಿ: ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಮಾರ್ಗದರ್ಶನ ಮಾಡಲು ಮಜೇಥಿಯಾ ಫೌಂಡೇಷನ್‌ ತನ್ನ 20 ಸಿಬ್ಬಂದಿಯನ್ನು ಕಿಮ್ಸ್‌ಗೆ ನೀಡಿದೆ. ಈ ಕುರಿತು ‘ನಮ್ಮ ಸಹಾಯ ನಿಮಗೆ ಬೇಕೆ?’ ಸಹಾಯವಾಣಿ ತಂಡದ ಒಪ್ಪಂದ ಮತ್ತು ಪ್ರಮಾಣವಚನ ಸ್ವೀಕಾರ ಸೋಮವಾರ ನಡೆಯಿತು.

ಆಸ್ಪತ್ರೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಹೋಗಲು, ರಕ್ತ ಪರೀಕ್ಷೆ, ಔಷಧಿ ವಿಭಾಗ, ಎಕ್ಸರೆ ಹೀಗೆ ಬೇರೆ ಬೇರೆ ವಿಭಾಗಗಳಿಗೆ ಹೋಗಲು ಈ ಸಿಬ್ಬಂದಿ ನೆರವಾಗುತ್ತಾರೆ. ಕಿಮ್ಸ್‌ ಆವರಣದಲ್ಲಿ ಅಲ್ಲಲ್ಲಿ ಇವರು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಹಿಡಿದುಕೊಂಡು ಇರುತ್ತಾರೆ. ಮಾಸ್ಕ್ ಧರಿಸದವರಿಗೆ ತಿಳಿಹೇಳಿ ಉಚಿತವಾಗಿ ಮಾಸ್ಕ್‌ ಕೊಡುತ್ತಾರೆ. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಸಿಬ್ಬಂದಿ ಕೆಲಸ ಮಾಡುತ್ತಾರೆ.

ಒಪ್ಪಂದದ ಬಳಿಕ ಮಾತನಾಡಿದ ಫೌಂಡೇಷನ್‌ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ‘ಕಿಮ್ಸ್‌ ಆವರಣ ದೊಡ್ಡದಾದ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಬರುವ ಜನರಿಗೆ ಯಾವ ವಿಭಾಗಕ್ಕೆ ಹೇಗೆ ಹೋಗಬೇಕು ಎನ್ನುವುದು ಬೇಗನೆ ಗೊತ್ತಾಗುವುದಿಲ್ಲ. ಅವರಿಗೆ ನಮ್ಮ ಸಿಬ್ಬಂದಿ ನೆರವಾಗುತ್ತಾರೆ. ಅಗತ್ಯಬಿದ್ದರೆ ಇನ್ನಷ್ಟು ಸಿಬ್ಬಂದಿ ಒದಗಿಸಲಾಗುವುದು’ ಎಂದರು.

ADVERTISEMENT

‘ರೋಗಿಗಳ ಜೊತೆ ಬರುವವರು ಕಿಮ್ಸ್ ಆವರಣದ ಪಾರ್ಕ್‌ನಲ್ಲಿ, ಗಿಡದ ನೆರಳಿನಲ್ಲಿ ಕುಳಿತು ಊಟ ಮಾಡುತ್ತಾರೆ. ಅವರಿಗೆ ಊಟದ ಶೆಲ್ಟರ್‌ ಕಟ್ಟಿಸಿಕೊಡಲಾಗುವುದು’ ಎಂದು ತಿಳಿಸಿದರು.

ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಮಾತನಾಡಿ ‘ಕೋವಿಡ್‌ ಸಮಯದಲ್ಲಿ ಅನೇಕ ಸಂಘ, ಸಂಸ್ಥೆಗಳು ಆಸ್ಪತ್ರೆ ಜೊತೆ ಕೈ ಜೋಡಿಸಿವೆ’ ಎಂದರು.

ನಿವೃತ್ತ ಏರ್‌ ಕಮಾಂಡರ್‌ ಸಿ.ಎಸ್‌. ಹವಾಲ್ದಾರ್‌ ಮಾತನಾಡಿ ‘ಕೋವಿಡ್‌ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದರೂ, ಸರ್ಕಾರ ಯೋಧರಿಗೆ ಮತ್ತು ವೈದ್ಯರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ವೈದ್ಯರು ಕೂಡ ಯೋಧರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಿಮ್ಸ್‌ ವೈದ್ಯಕೀಯ ಅಧೀಕ್ಷಕ (ಉಸ್ತುವಾರಿ) ಡಾ. ರಾಜಶೇಖರ ದ್ಯಾಬೇರಿ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಉಪ ವೈದ್ಯಕೀಯ ಅಧೀಕ್ಷಕ ಮುಲ್ಕಿ ಪಾಟೀಲ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಲಕ್ಷ್ಮಿಕಾಂತ್‌ ಲೋಖರೆ, ಫೌಂಡೇಷನ್‌ ಸಲಹಾ ಸಮಿತಿ ಸದಸ್ಯರಾದ ಡಾ. ಕೆ. ರಮೇಶಬಾಬು, ಡಾ. ವಿ.ಬಿ. ನಿಟಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.