ADVERTISEMENT

ಹುಬ್ಬಳ್ಳಿ: ಹಣ ಪಾವತಿ ಹೆಸರಲ್ಲಿ ವ್ಯಾಪಾರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 4:30 IST
Last Updated 24 ಜನವರಿ 2022, 4:30 IST

ಹುಬ್ಬಳ್ಳಿ: ಧಾರವಾಡ ಕಬ್ಬಿಣದ ವ್ಯಾಪಾರಿಯೊಬ್ಬರಿಗೆ ಆನ್‌ಲೈನ್ ಮೂಲಕ ಹಣ ಪಾವತಿಸುವ ನೆಪದಲ್ಲಿ ದುಷ್ಕರ್ಮಿಗಳು ₹1.45 ಲಕ್ಷ ವಂಚಿಸಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿ ವ್ಯಾಪಾರಿಗೆ ಕರೆ ಮಾಡಿರುವ ವಂಚಕರು, ತಮ್ಮಲ್ಲಿ ಕಬ್ಬಿಣ ಖರೀದಿಸುವುದಾಗಿ ಹೇಳಿದ್ದಾರೆ.

ಹಣ ಪಾವತಿಸುವ ಸಲುವಾಗಿ ವ್ಯಾಪಾರಿಯ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕ್ಯೂ ಆರ್‌ ಕೋಡ್ ಕಳಿಸಿ, ಅದನ್ನು ಸ್ಕ್ಯಾನ್ ಮಾಡಿದರೆ ಹಣ ನಿಮಗೆ ಜಮೆಯಾಗುತ್ತದೆ ಎಂದಿದ್ದಾರೆ. ಅದರಂತೆ ವ್ಯಾಪಾರಿ ಸ್ಕ್ಯಾನ್ ಮಾಡಿದಾಗ, ಅವರ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತವಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಆಂಬುಲೆನ್ಸ್:ವಿದ್ಯಾನಗರದ ಬಿಆರ್‌ಟಿಎಸ್ ಮೇಲ್ಸೇತುವೆಯಿಂದ ಶನಿವಾರ ರಾತ್ರಿ ಆಂಬುಲೆನ್ಸ್‌ವೊಂದು ಕೆಳಕ್ಕೆ ಬಿದ್ದಿದೆ. ಆಂಬುಲೆನ್ಸ್‌ನಲ್ಲಿ ಚಾಲಕ ಮಾತ್ರ ಇದ್ದ ಎನ್ನಲಾಗಿದ್ದು, ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ.

ADVERTISEMENT

ನವನಗರದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್‌, ಹುಬ್ಬಳ್ಳಿಯ ಕಡೆಗೆ ಬರುತ್ತಿತ್ತು. ಎಂ.ಆರ್. ಸಾಕ್ರೆ ಶಾಲೆಯ ಬಳಿ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದಿರುವ ಸಾಧ್ಯತೆ ಇದೆ. ಈ ವೇಳೆ, ಕೆಳಭಾಗದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಹಾಗೂ ಜನರು ಇಲ್ಲದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಲ್ಲಿ ಆಂಬುಲೆನ್ಸ್ ಜಖಂಗೊಂಡಿದೆ. ಘಟನೆ ಬಳಿಕ ಚಾಲಕ ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ಮಹಿಳೆ ಆತ್ಮಹತ್ಯೆ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉದ್ಯೋಗಿ ಹಾಗೂಮಂಜುನಾಥನಗರದ ನಿವಾಸಿ ಸುಜಾತಾ ವೀರಪ್ಪ ಹಂಚೇರ ಅವರು, ನಗರದ ಗೋಕುಲ ರಸ್ತೆಯಲ್ಲಿರುವ ಬಸ್ ಡಿಪೊದ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ ಕರ್ತವ್ಯಕ್ಕೆ ಬಂದಿದ್ದ ಸುಜಾತಾ, ಮಹಿಳಾ ವಿಶ್ರಾಂತಿ ಗೃಹದಲ್ಲಿ ನೇಣು ಹಾಕಿಕೊಂಡಿದ್ದಾರೆ. ಸ್ಥಳದಲ್ಲಿ ಮರಣ ಪತ್ರ ಪತ್ತೆಯಾಗಿದ್ದು, ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಅಪರಿಚಿತರ ಸಾವು:ನಗರದ ರೈಲು ನಿಲ್ದಾಣದಲ್ಲಿ ಭಾನುವಾರ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. 45 ವರ್ಷದ ವ್ಯಕ್ತಿಯೊಬ್ಬರು ನಾಲ್ಕನೇ ಪ್ಲಾಟ್‌ಫಾರಂನಲ್ಲಿ ಮೃತಪಟ್ಟಿದ್ದರೆ, ಸುಮಾರು 40 ವರ್ಷದ ಮತ್ತೊಬ್ಬರು ವಿಐಪಿ ಕೊಠಡಿ ಬಳಿ ಮಲಗಿದ್ದ ಸ್ಥಿತಿಯಲ್ಲೇ ಕೊನೆಯುಸಿರೆಳೆದಿದ್ದಾರೆ. ವಾರಸುದಾರರು ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.