
ಧಾರವಾಡ: ‘ಜನರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಖಾದ್ಯಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಡೀನ್ ಪ್ರೊ. ಹೇಮಲತಾ ಎಸ್. ಹೇಳಿದರು.
ಕೃಷಿ ಇಲಾಖೆ ವತಿಯಿಂದ ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ’ ಎಂದರು.
‘ಪಾರಂಪರಿಕ ಆಹಾರ ಪದ್ಧತಿಗಳು ನಶಿಸಿ ಹೋಗುತ್ತಿದ್ದು, ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ಧತಿಗಳ ಪೌಷ್ಟಿಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಿ, ಸಾಂಪ್ರದಾಯಿಕತೆಯನ್ನು ಮುಂದೆ ಕೊಂಡೊಯ್ಯುವುದು, ಪ್ರಚಲಿತ ಕಾಲಘಟ್ಟದಲ್ಲಿ ಅವಶ್ಯಕ’ ಎಂದರು.
ಹುಬ್ಬಳ್ಳಿ, ಧಾರವಾಡ ಮತ್ತು ಕಲಘಟಗಿ ತಾಲ್ಲೂಕುಗಳಿಂದ 20 ಸ್ಪರ್ಧಿಗಳು ಭಾಗವಹಿಸಿ ನವಣೆ, ಸಜ್ಜೆ, ಹಾರಕ, ಬರಗು, ಸಾವೆ ಹಾಗೂ ಜೋಳದ ಧಾನ್ಯಗಳಿಂದ ತಯಾರಿಸಿದ ಒಟ್ಟು 20 ವಿವಿಧ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪ ಕೃಷಿ ನಿರ್ದೇಶಕ ನಾಗರಾಜ ಟಿ., ಸಂದೀಪ ಆರ್.ಜಿ., ಸಹಾಯಕ ನಿರ್ದೇಶಕಿ ಸುಷ್ಮಾ ಮಳಿಮಠ, ಕೃಷಿ ಅಧಿಕಾರಿ ಮಾಲತೇಶ ಪುಟ್ಟಣ್ಣವರ ಇದ್ದರು.
ಸಿಹಿ ಖಾದ್ಯಗಳ ವಿಭಾಗದಲ್ಲಿ ರಂಜನಾ ಕುಲಕರ್ಣಿ ಪ್ರಥಮ, ವಿಜಯಾ ಕುಲಕರ್ಣಿ ದ್ವಿತೀಯ, ಲಲಿತ ಮೇಗುಂಡಿ ತೃತೀಯ ಸ್ಥಾನ ಪಡೆದರು. ಖಾರದ ಖಾದ್ಯಗಳ ವಿಭಾಗದಲ್ಲಿ ಸಾವಿತ್ರಿ ದುದಗಿ ಪ್ರಥಮ, ರಂಜನಾ ಕುಲಕರ್ಣಿ ದ್ವಿತೀಯ, ಹಾಗೂ ಅಕ್ಷತಾ ಉಪಕಾರಿ ತೃತೀಯ ಸ್ಥಾನ ಪಡೆದರು.ಹಾಗೂ ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ವೀಣಾ ಬಟ್ಟೇಪಾಟಿ ಪ್ರಥಮ, ಶಿವಲೀಲಾ ಮದ್ದಾನಿಮಠ ದ್ವಿತೀಯ, ಹಾಗೂ ಸೌಮ್ಯಾ ಬೆಡಸೂರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ನೀಡಿ, ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.