ಹುಬ್ಬಳ್ಳಿ: ‘ನಮಸ್ತೆ ಕಾಶಿ’ ಯಾತ್ರಾ ಸಮಿತಿಯ 150 ಕಾರ್ಯಕರ್ತರು ಉತ್ತರಪ್ರದೇಶದ ಕಾಶಿಗೆ ಕೈಗೊಂಡಿರುವ ಕಾಶಿ ದರ್ಶನ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರವಾದ ಕಾಶಿಯಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಅಭೂತಪೂರ್ವ ಬದಲಾವಣೆ ತಂದಿದ್ದಾರೆ. ಅಲ್ಲಿಗೆ ಎಲ್ಲರೂ ಭೇಟಿ ನೀಡಬೇಕೆಂಬ ಉದ್ದೇಶದಿಂದ ನಮಸ್ತೆ ಕಾಶಿ, ದಿವ್ಯ ಕಾಶಿ, ಭವ್ಯ ಕಾಶಿ ಎಂಬ ಕಾರ್ಯಕ್ರಮಕ್ಕೆ ಅವರು ಕರೆ ಕೊಟ್ಟಿದ್ದಾರೆ. ಅದಕ್ಕಾಗಿ ನನ್ನ ಲೋಕಸಭಾ ಕ್ಷೇತ್ರದಿಂದ 150 ಮಂದಿ ಕಾಶಿ ದರ್ಶನ ಯಾತ್ರೆ ಕೈಗೊಂಡಿದ್ದಾರೆ’ ಎಂದರು.
‘ಪ್ರಧಾನಿ ಕರೆಯಂತೆ ಕಾಶಿಗೆ ಭೇಟಿ ನೀಡಲಿರುವ ಯಾತ್ರಿಗಳು, ಅಲ್ಲಿಂದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಯಾತ್ರಿಗಳ ಪೈಕಿ 80 ಮಹಿಳೆಯರಿದ್ದಾರೆ. ಎಲ್ಲರೂ ನವೀಕೃತ ಕಾಶಿ ಕಣ್ತುಂಬಿಕೊಂಡು ಬರಲಿದ್ದಾರೆ’ ಎಂದು ಹೇಳಿದರು.
ಯಾತ್ರಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಸಚಿವ ಪ್ರಲ್ಹಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ, ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮುಖಂಡರಾದ ವೀರಭದ್ರಪ್ಪ ಹಾಲಹರವಿ, ವೀರಣ್ಣ ಸವಡಿ, ಡಿ.ಕೆ. ಚವ್ಹಾಣ, ಚಂದ್ರಶೇಖರ ಗೋಕಾಕ, ಮಹೇಂದ್ರ ಕೌತಾಳ, ಮೀನಾಕ್ಷಿ ವಂಟಮೂರಿ, ರೂಪಾ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.