ADVERTISEMENT

‘ಆಪರೇಷನ್‌ ಸಿಂಧೂರ’ ಹೆಸರಲ್ಲಿ ಮತಯಾಚನೆ; ಸಚಿವ ಲಾಡ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:53 IST
Last Updated 6 ಅಕ್ಟೋಬರ್ 2025, 7:53 IST
ಸಂತೋಷ ಲಾಡ್
ಸಂತೋಷ ಲಾಡ್   

ಹುಬ್ಬಳ್ಳಿ/ಧಾರವಾಡ: ‘ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಆಪರೇಷನ್‌ ಸಿಂಧೂರ’ ಹೆಸರಲ್ಲಿ ಮತಯಾಚನೆ ಮಾಡುತ್ತಿರುವುದು ಖಂಡನೀಯ. ಅವರು ನಿಜವಾಗಿಯೂ ವಿಶ್ವಗುರುವಿನಂತೆ ಕೆಲಸ ಮಾಡಿದ್ದರೆ ಮತಯಾಚಿಸುವ ಅಗತ್ಯವೇ ಇರುತ್ತಿರಲಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಇಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಮೋದಿ, ಬಿಹಾರ ಚುನಾವಣೆ ಹಿನ್ನೆಯಲ್ಲಿ ಮಹಿಳೆಯರಿಗಾಗಿ ₹7,500 ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸಿದ್ದಾರೆ’ ಎಂದರು.

‘ಬಿಜೆಪಿ ಹಿಂದೂ–ಮುಸ್ಲಿಮರ ನಡುವಿನ ಸಾಮರಸ್ಯ ಹಾಳು ಮಾಡುತ್ತಿದ್ದು, ನಾವೆಲ್ಲ ಏಕತೆ ಪ್ರದರ್ಶಿಸಬೇಕಿದೆ. ಪಾಕಿಸ್ತಾನ ಅಪಾಯಕಾರಿ ಎಂದು ತಿಳಿದಿದ್ದರೂ ಆ ದೇಶದೊಂದಿಗೆ ಕ್ರಿಕೆಟ್‌ ಪಂದ್ಯವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ, ಐಸಿಸಿ ಅಧ್ಯಕ್ಷ ಜಯ್‌ ಶಾ ಏಕೆ ಆಯೋಜಿಸಿದರು’ ಎಂದು ಪ್ರಶ್ನಿಸಿದರು.   

ADVERTISEMENT

‘ಧರ್ಮ ಒಡೆಯಲು ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ‘ಧರ್ಮ, ಹಿಂದೂ ಒಳಪಂಗಡಗಳನ್ನು ಒಡೆಯುವವರು ಬಿಜೆಪಿಯವರು. ಹಿಂದೂ ಹೆಸರಿನಲ್ಲಿ ಬಿಜೆಪಿಯವರು ಮತ ಪಡೆದು, ಲಾಭ ಮಾಡಿಕೊಳ್ಳುತ್ತಾರೆ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್‌) ಶೇ 10 ಮೀಸಲಾತಿ ಕಲ್ಪಿಸಿದ್ದು ಯಾವ ಜಾತಿಯವರಿಗೆಂದು ಸಚಿವ ಜೋಶಿ ಸ್ಪಷ್ಟಪಡಿಸಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.