ADVERTISEMENT

ಹುಬ್ಬಳ್ಳಿ: ಮಿಶ್ರಿಕೋಟೆ ಇದೀಗ ಮೀನುಗಾರಿಕೆಗೆ ಪ್ರಸಿದ್ಧಿ

ಧಾರವಾಡ ಜಿಲ್ಲೆಯಲ್ಲೇ ಅತಿ ಹೆಚ್ಚು ಮೀನು ಬೆಳೆಯುವ ಗ್ರಾಮ

ಕಲಾವತಿ ಬೈಚಬಾಳ
Published 13 ಜುಲೈ 2025, 5:47 IST
Last Updated 13 ಜುಲೈ 2025, 5:47 IST
<div class="paragraphs"><p>ಕೆರೆಯಲ್ಲಿ ಮೀನು ಮರಿಗಳನ್ನು ಬಿಡುತ್ತಿರುವ ಮೀನುಗಾರರು</p></div><div class="paragraphs"><ul><li><p><br></p></li></ul></div>

ಕೆರೆಯಲ್ಲಿ ಮೀನು ಮರಿಗಳನ್ನು ಬಿಡುತ್ತಿರುವ ಮೀನುಗಾರರು


   

ಹುಬ್ಬಳ್ಳಿ: ಕಲಘಟಗಿ ತಾಲ್ಲೂಕಿನಲ್ಲಿಯೇ ಮಿಶ್ರಿಕೋಟೆ ದೊಡ್ಡ ಗ್ರಾಮ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮವೂ ಹೌದು. 2011ರ ಭಾರತದ ಜನಗಣತಿಯ ಪ್ರಕಾರ 1,932 ಮನೆಗಳಿದ್ದು 9,006 ಜನಸಂಖ್ಯೆ ಹೊಂದಿದೆ.

ADVERTISEMENT

ಹಿನ್ನಲೆ: ಮಿಶ್ರಿಕೋಟೆಯ ಪೂರ್ವಕ್ಕೆ ಕಿಲ್ಲೆ ಭಾಗವಿದ್ದು, ಸುತ್ತಲೂ ಜಲಕಂದಕ (ಜಲದುರ್ಗ)ದಿಂದ ನಿರ್ಮಿತವಾದ ಕೋಟೆ ಗೋಡೆಯಿದೆ. ಮೂಲೆಗೆ ಹಾಗೂ ಮಧ್ಯಭಾಗದ ಕೋಟೆಯ ಮೇಲೆ ಬೂರುಜುಗಳಿದ್ದು ಅವು ಈಗ ಶಿಥಿಲಗೊಂಡಿವೆ. ಹಿಂದಿನ ಕಾಲದಲ್ಲಿ ಪೇಟಾ ಸ್ಥಳವಾಗಿ ಮಹಾಲ ಕಚೇರಿ ಇತ್ತು. 1857ರಲ್ಲಿ ಆಗ ಕಚೇರಿಯಾಗಿದ್ದ ಸ್ಥಳ (ಈಗಿನ ಗಂಡು ಮಕ್ಕಳ ಮಾದರಿ ಕೇಂದ್ರ ಶಾಲೆ)ದಲ್ಲಿ ಖರೀದಿಯಾಗಿ ನೋಂದಣಿಯಾದ ದಾನಪತ್ರವೊಂದದು ನೋಡಲು ಸಿಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ರಾಜಕೀಯವಾಗಿ ಇದು ಸವಣೂರು ಸಂಸ್ಥಾನಕ್ಕೆ ಸೇರಿತ್ತು ಎನ್ನಲಾಗಿದೆ. ಗ್ರಾಮದ ದಕ್ಷಿಣಕ್ಕೆ ಹರಿಯುವ ಶಾಲ್ಮಲಾ ನದಿ ದಾಟುವ ಮಾರ್ಗಕ್ಕೆ ಸವಣೂರು ಹಾಯುದಳ ಎಂಬ ಹೆಸರು ಹಿರಿಯರಿಂದ ಪ್ರಚಲಿತಕ್ಕೆ ಬಂದಿದೆ. ಗ್ರಾಮದಲ್ಲಿ ರಾಮೇಶ್ವರ ಹಾಗೂ ಮಾರುತಿ ಎಂಬ ಎರಡು ಪ್ರಾಚೀನ ದೇವಾಲಯಗಳು ಇವೆ. ಇದರ ನಿರ್ಮಾಣ ಕಾರ್ಯದಲ್ಲಿ ಉಪಯೋಗಿಸಿದ ಇಟ್ಟಿಗೆಗಳು ಕಲ್ಲಿನಂತೆ ಬಿರುಸಾಗಿವೆ. ಇಲ್ಲಿ ಹಲವು ಶಿಲಾ ಶಾಸನಗಳು ಕೂಡ ಇವೆ.

ಮಿಶ್ರಿಕೋಟೆ ಗ್ರಾಮವು ಧಾರವಾಡ ಜಿಲ್ಲೆಯಲ್ಲೇ ಅತೀ ಹೆಚ್ಚು ಮೀನುಗಳನ್ನು ಉತ್ಪಾದಿಸುವ ಗ್ರಾಮವಾಗಿಯೂ ಹೊರಹೊಮ್ಮಿದೆ. ಇಲ್ಲಿನ ಮೀನುಗಾರಿಕೆ ಬಗ್ಗೆ ಇಲ್ಲಿದೆ ಮಾಹಿತಿ.

ಮಿಶ್ರಿಕೋಟೆಯಲ್ಲಿ ಅಂದಾಜು 150 ಹೆಕ್ಟೇರ್‌ ಜಲ ವಿಸ್ತೀರ್ಣ ಪ್ರದೇಶವಿದೆ. ಸರಿಸುಮಾರು 100–150 ಜನ ಮೀನುಗಾರರಿದ್ದಾರೆ. ಗಂಜಿಗಟ್ಟಿ ಕೆರೆ, ಸೋಮನಕೊಪ್ಪಕೆರೆ, ದುಮ್ಮವಾಡ ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಾಜು 100 ಕೆರೆಗಳಲ್ಲೂ ಮೀನುಗಾರಿಕೆ ಮಾಡಲಾಗುತ್ತದೆ.

ಕೆರೆಗಳಿಗೆ ಒಮ್ಮೆಲೇ ಮೀನು ಮರಿಗಳನ್ನು ಬಿಟ್ಟರೆ ಶೇ 20–30ರಷ್ಟು ಮೀನು ಮರಿಗಳು ಸಾಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಕೆರೆ ದಡದ ಹೊಂಡಗಳಲ್ಲಿ ಮೀನುಮರಿಗಳನ್ನು ಪಾಲನೆ ಮಾಡಿ, 70–80 ಮೀಲಿ ಮೀಟರ್‌ನಷ್ಟು ಮರಿಗಳು ದೊಡ್ಡದಾದ ಬಳಿಕ ಕೆರೆಗಳಿಗೆ ಬಿಡುವುದರಿಂದ ಮೀನುಗಳು ಚನ್ನಾಗಿ ಬೆಳೆಯುತ್ತವೆ ಎನ್ನುತ್ತಾರೆ ಮಿಶ್ರಿಕೋಟೆಯ ಮೀನುಗಾರರು.

‘1961ರಲ್ಲಿ ಕಲಘಟಗಿ ತಾಲ್ಲೂಕು ಮೀನುಗಾರಿಕೆ ಸಹಕಾರ ಸಂಘ ಸ್ಥಾಪನೆಯಾಗಿದ್ದು, 200 ಜನ ಸದಸ್ಯರಿದ್ದಾರೆ. ಸರ್ಕಾರದ ವ್ಯಾಪ್ತಿಯ ಕೆರೆಗಳನ್ನು ಹರಾಜಿನ ಮೂಲಕ ಪಡೆದು ಮೀನುಗಾರಿಕೆ ಮಾಡಲಾಗುತ್ತದೆ. ಮಳೆಗಾಲದಲ್ಲಿ ಮೀನು ಮರಿಗಳನ್ನು ಕೆರೆಗಳಿಗೆ ಬಿಡಲಾಗುತ್ತದೆ. ಬೇಸಿಗೆಯಲ್ಲಿ ಮೀನುಗಳನ್ನು ಹಿಡಿಯುತ್ತಾರೆ’ ಎಂದು ಸಂಘದ ಅಧ್ಯಕ್ಷ ಗೋವಿಂದಪ್ಪ ಭೋವಿ ತಿಳಿಸಿದರು.

‘ಇಲ್ಲಿ ಕಟ್ಲಾ, ರೊಹು, ಮೃಗಾಲ, ಗೌರಿಮೀನು, ಗ್ರಾಸ್‌ಕಾರ್ಪ್‌ ತಳಿಯ ಮೀನುಗಳನ್ನೇ ಹೆಚ್ಚಾಗಿ ಬೆಳೆಯುತ್ತೇವೆ. ಮಿಶ್ರಿಕೋಟೆ, ಕಲಘಟಗಿ ಮೀನು ಮಾರುಕಟ್ಟೆ, ಸ್ಥಳೀಯ ಸಂತೆಗಳಲ್ಲಿ, ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೇ ಹುಬ್ಬಳ್ಳಿಯ ಮೀನು ವ್ಯಾಪಾರಸ್ಥರಿಗೂ ಮಾರಾಟ ಮಾಡುತ್ತೇವೆ. ಕೆ.ಜಿಗೆ ಅಂದಾಜು ₹50ರಿಂದ ₹100ರ ವರೆಗೂ ದರ ಸಿಗುತ್ತದೆ’ ಎಂದು ಮೀನುಗಾರ, ಸಂಘದ ಪ್ರಧಾನಕಾರ್ಯದರ್ಶಿಯೂ ಆದ ಸುರೇಶ ಭೋವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪೂರಕ ಮಾಹಿತಿ: ಕಲ್ಲಪ್ಪ ಮಿರ್ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.