ADVERTISEMENT

ಆಶ್ರಯ ಫಲಾನುಭವಿಗಳಿಂದ ಶಾಸಕರಆಪ್ತ ಕಾರ್ಯದರ್ಶಿಯಿಂದ ಹಣ ವಸೂಲಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 3:46 IST
Last Updated 13 ಮಾರ್ಚ್ 2022, 3:46 IST

ಕುಂದಗೋಳ: ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಂಜುನಾಥ ಹಡಪದ (ಹಾಲಿ ಶಾಸಕರ ಆಪ್ತ ಕಾರ್ಯದರ್ಶಿ) ಅವರು ಪಟ್ಟಣದ ಅಮರಶಿವ ಆಶ್ರಯ ಬಡಾವಣೆಯ ಫಲಾನುಭವಿಗಳಿಂದ ಹಣ ಪಡೆದಿದ್ದಾರೆ ಎಂದು ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಗಂಭೀರವಾಗಿ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಕಾರಣ ಬಡ ಫಲಾನುಭವಿಗಳು ಮನೆ ನಿರ್ಮಾಣ ಮಾಡುವುದು ವಿಳಂಬವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಮಂಜುನಾಥ ಅವರು ಮನೆ ನಿರ್ಮಿಸದಿದ್ದರೆ ನಿಮ್ಮ ಪ್ಲಾಟ್ ಹಾಗು ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎಂದು ದಾರಿ ತಪ್ಪಿಸಿ, ಬಡವರನ್ನು ಹೆದರಿಸಿ ಕೆಲವು ಫಲಾನುಭವಿಗಳಿಂದ ₹ 10 ಸಾವಿರ ಹಣ ಪಡೆದಿದ್ದಾರೆ. ಅವರನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೂ ಈ ಬಗ್ಗೆ ಮೌಖಿಕವಾಗಿ ಮಾಹಿತಿ ನೀಡಲಾಗಿದೆ ಎಂದರು. ಕರವೇ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಸುರೇಶ ಧಾರವಾಡ ಮಾತನಾಡಿ ಮಂಜುನಾಥ ಹಡಪದ ಅವರು ಪ.ಪಂ ಕಚೇರಿಯಲ್ಲಿ ಕರವಸೂಲಿಗಾರ ಎಂಬ ಹುದ್ದೆಯಲ್ಲಿದ್ದರು. ಭ್ರಷ್ಟಾಚಾರ ಎಸಗಿರುವ ಅವರ ಮೇಲೆ ಕ್ರಮ ಜರುಗಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ADVERTISEMENT

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಇಂಗಳಳ್ಳಿ,ಉಪಾಧ್ಯಕ್ಷ ಸುರೇಶ ಶಾನಬಾಗ, ಜಿಲ್ಲಾ ಉಪಾಧ್ಯಕ್ಷ ಅಮಿತ ನರವಟೆ, ಮಂಜುನಾಥ ಬೂದಿಹಾಳಶಟ್ರ, ಶಿವಾನಂದ ಪೂಜಾರ, ಶರಣಪ್ಪ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.