ಹುಬ್ಬಳ್ಳಿ:ಕೈಗಾರಿಕೆಗಳ ಅಭಿವೃದ್ಧಿಗೆ ಜಮೀನು ನೀಡಿದ ರೈತರಿಗೆ ಸರ್ಕಾರ ಪರಿಹಾರದ ಹಣ ನೀಡಿ ಯಾವುದೇ ಉಪಕಾರ ಮಾಡುತ್ತಿಲ್ಲ. ಬದಲಾಗಿ ರೈತರಿಗೆ ಸಲ್ಲಬೇಕಾದ ಹಣ ಮಧ್ಯವರ್ತಿಗಳ ಹಾವಳಿ ಇಲ್ಲದೆನೇರವಾಗಿ ರೈತರ ಬ್ಯಾಂಕುಗಳ ಖಾತೆಗೆ ಜಮೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಗಾಮನಗಟ್ಟಿ ಸರ್ಕಾರಿ ಶಾಲೆಯಲ್ಲಿ ಕೆ.ಐ.ಎ.ಡಿ.ಬಿ.ಗೆ ಜಮೀನು ನೀಡಿದ ರೈತರಿಗೆ ಭೂ ಪರಿಹಾರ ವಿತರಿಸಿ ಮಾತನಾಡಿದ ಅವರು ‘ಅಧಿಕಾರಿಗಳು ಜಮೀನು ನೀಡಿದ ರೈತರಿಂದ ಹಣ ಪಡೆದರೆ ಪಾಪ ತಟ್ಟುತ್ತೆ. ಕೆಲವು ಅಧಿಕಾರಿಗಳು ತಾಂತ್ರಿಕ ದೋಷಗಳನ್ನು ಮುಂದಿಟ್ಟು ಪರಿಹಾರ ನೀಡಲು ಶೇ 6ರಷ್ಟು ಹಣ ಕೇಳಿದ್ದಾರೆ ಎನ್ನುವುದುಕಿವಿಗೆ ಬಿದ್ದಿದೆ. ಅಂಥ ಅಧಿಕಾರಿಗಳು ಸಿಕ್ಕಿ ಬಿದ್ದರೆಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು. ಗಾಮನಗಟ್ಟಿ ಸರ್ಕಾರಿ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ ‘ಕೆ.ಐ.ಎ.ಡಿ.ಬಿ ವತಿಯಿಂದ ಗಾಮನಗಟ್ಟಿ ಹಾಗೂ ಇಟಗಟ್ಟಿ ಭಾಗದ ಜಮೀನುಗಳನ್ನು ಅಧಿಸೂಚಿಸಿ ಖರೀದಿಸದೇ ಹಾಗೆ ಬಿಡಲಾಗಿತ್ತು.ಸರ್ಕಾರದಿಂದ ರೈತರಿಗೆ ಹಣ ಪಾವತಿಸಲು ₹279 ಕೋಟಿ ಬಿಡುಗಡೆ ಮಾಡಲಾಗಿದೆ. ಪಾರದರ್ಶಕವಾಗಿ 600 ಎಕರೆ ಜಮೀನುಖರೀದಿಸಲಾಗಿದೆ’ ಎಂದರು.ಜಮೀನು ನೀಡಿದ ಗಾಮನಗಟ್ಟಿ ಹಾಗೂ ಇಟಗಟ್ಟಿಯ 26 ರೈತರಿಗೆ ₹36.72 ಕೋಟಿ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ಶಾಸಕ ಅರವಿಂದ ಬೆಲ್ಲದ ಮಾತನಾಡಿ ’ಇಟಗಟ್ಟಿ ಹಾಗೂ ಗಾಮನಗಟ್ಟಿ ನೋಟಿಫೈ ಮಾಡಿದ್ದರಿಂದ, ಕೃಷಿ ಸೇರಿದಂತೆ ಇತರೆ ಕಾರ್ಯಗಳಿಗೆ ಅಡಚಣೆ ಆಗಿತ್ತು. ಇದನ್ನು ಪರಿಹರಿಸಿ ಜಮೀನು ಖರೀದಿಸಲಾಗಿದೆ.ಮಧ್ಯವರ್ತಿ ರೈತರನ್ನು ಶೋಷಿಸದಂತೆ ವ್ಯವಹಾರವನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದೆ’ ಎಂದರು.
ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ,ಉಪ ವಿಭಾಗಾಧಿಕಾರಿ ಗೋಪಾಲ ಕೃಷ್ಣ, ಕೆ.ಐ.ಡಿ.ಬಿ. ಅಧಿಕಾರಿಗಳಾದ ಮನೋಹರ ವಡ್ಡರ್, ವಸಂತ ಕುಮಾರ್, ತಹಶೀಲ್ದಾರ್ಶಶಿಧರ ಮಾಡ್ಯಾಳ, ಮಾಜಿ ಮೇಯರ್ಮಂಜುಳಾ ಅಕ್ಕೂರ, ಮಾಜಿ ಉಪ ಮೇಯರ್ಚಂದ್ರಶೇಖರ ಮನಗುಂಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.