
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಅಗತ್ಯ ಸೌಲಭ್ಯಗಳು ಇಲ್ಲದೇ ಸೊರಗುತ್ತಿವೆ. ಈಗಾಗಲೇ ಶೇ 10ರಷ್ಟು ಸಣ್ಣ ಉದ್ಯಮಗಳು ಬಂದ್ ಆಗಿವೆ. ಕೆಲವು ಗೋದಾಮುಗಳಾಗಿವೆ!
ಗೋಕುಲ ಕೈಗಾರಿಕಾ ವಸಾಹತು (ಎಸ್ಟೇಟ್) ಸೇರಿ ಗಾಮನಗಟ್ಟಿ, ತಾರಿಹಾಳ, ಲಕ್ಕಮನಹಳ್ಳಿ, ರಾಯಾಪುರ, ಬೇಲೂರು ಮತ್ತು ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶ ಸೇರಿ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ 7 ಕೈಗಾರಿಕಾ ಎಸ್ಟೇಟ್ಗಳಿವೆ. ಇವುಗಳಲ್ಲಿ ಗೋಕುಲ ರಸ್ತೆ, ಗಾಮನಗಟ್ಟಿ, ತಾರಿಹಾಳ ಕೈಗಾರಿಕಾ ವಸಾಹತುಗಳು ಪ್ರಮುಖ.
‘ಇಲ್ಲಿನ ಬಹುತೇಕ ಕೈಗಾರಿಕಾ ವಸಾಹತುಗಳು ವಿದ್ಯುತ್, ನೀರು, ರಸ್ತೆ ಸೇರಿ ಅಗತ್ಯ ಸೌಲಭ್ಯಗಳಿಲ್ಲ. ಸರ್ಕಾರಕ್ಕೆ ಸಕಾಲಕ್ಕೆ ಜಿಎಸ್ಟಿ ಪಾವತಿಸುತ್ತೇವೆ. ಉದ್ಯಮದ ಬೆಳವಣಿಗೆಗೆ ಪೂರಕ ಸೌಲಭ್ಯ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ’ ಎಂಬುದು ಸಣ್ಣ, ಮಧ್ಯಮ ಉದ್ದಿಮೆದಾರರ ಆರೋಪ.
‘ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಗಳಲ್ಲಿ 1,200ಕ್ಕೂ ಹೆಚ್ಚು ಎಂಎಸ್ಎಂಇ ಉದ್ಯಮಗಳಿವೆ. ಇಂದಿಗೂ ವಿದ್ಯುತ್, ನೀರು, ಉತ್ತಮ ರಸ್ತೆ ಸೌಲಭ್ಯ ಸೇರಿ ಸರ್ಕಾರದ ಪ್ರೋತ್ಸಾಹಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಸಕಾಲಕ್ಕೆ ಸಿಗುತ್ತಿಲ್ಲ’ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ ಹೇಳಿದರು.
₹2 ಸಾವಿರ ಕೋಟಿ ವಹಿವಾಟು: ‘ಮೂಲಸೌಲಭ್ಯ ಕೊರತೆ ನಡುವೆಯೂ ಇಲ್ಲಿನ ಎಂಎಸ್ಎಂಇಗಳು ವಾರ್ಷಿಕ ₹1,500 ಕೋಟಿಯಿಂದ ₹2 ಸಾವಿರ ಕೋಟಿವರೆಗೆ ವಹಿವಾಟು ನಡೆಸುತ್ತವೆ. ಪ್ರತಿ ತಿಂಗಳು ಸರ್ಕಾರಕ್ಕೆ ₹200 ಕೋಟಿಯಿಂದ ₹300 ಕೋಟಿಯ ತನಕ ಜಿಎಸ್ಟಿ ಪಾವತಿ ಆಗುತ್ತದೆ.
ಗೋಕುಲ ಕೈಗಾರಿಕಾ ವಸಾಹತು ಹಳೆಯ ಪ್ರದೇಶದಲ್ಲಿ 400ಕ್ಕೂ ಅಧಿಕ ಉದ್ಯಮಗಳು ಇವೆ. ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಒಳಚರಂಡಿ ವ್ಯವಸ್ಥೆ ಹಾಳಾಗಿದೆ. ಬೀದಿ ದೀಪಗಳು ಹಾಳಾಗಿವೆ. ಇಲ್ಲಿನ ಉದ್ಯಮಗಳು 24X7 ಕೆಲಸ ಮಾಡಲು ಸಿದ್ಧವಿದ್ದರೂ ವಿದ್ಯುತ್ ಹಾಗೂ ನೀರಿನ ಸಮಸ್ಯೆಯಿದೆ. ಇದು ಉದ್ಯಮಗಳ ವ್ಯಾಪಾರ– ವಹಿವಾಟುವಿನ ಮೇಲೆ ಪರಿಣಾಮ ಬಿರುತ್ತಿದೆ.
ಅನುಷ್ಠಾನವಾಗದ ‘ಬೆಂಗಳೂರು ಆಚೆ ಪರಿಕಲ್ಪನೆ’: ‘ಬೆಂಗಳೂರು ಹೊರುತುಪಡಿಸಿ, ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ದೊಡ್ಡ ಉದ್ಯಮಗಳ ಸ್ಥಾಪನೆಗೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇಲ್ಲಿ ಅಗತ್ಯ ಭೂಮಿ ಇದ್ದರೂ ಸೌಲಭ್ಯವಿಲ್ಲ. ದೊಡ್ಡ ಉದ್ದಿಮೆದಾರರು ಇಲ್ಲಿಗೆ ಬರಲ್ಲ. ಸಣ್ಣ, ಮಧ್ಯಮ ಉದ್ಯಮಗಳು ಬೆಳೆಯಲು ಸಾಧ್ಯವಾಗಲ್ಲ’ ಎಂದು ರಮೇಶ ಪಾಟೀಲ ತಿಳಿಸಿದರು.
ಗೋಕುಲ ಕೈಗಾರಿಕಾ ವಸಾಹುತುವಿನಲ್ಲಿ ಮೂಲಸೌಲಭ್ಯ ಸಮಸ್ಯೆಯಿದೆ. ರಸ್ತೆಗಳು ಚಿಕ್ಕದಿವೆ. ಉತ್ಪನ್ನ ಸಾಗಿಸಲು ಆಗುತ್ತಿಲ್ಲ. ನಮ್ಮಂತಹ ಸಣ್ಣ ಉದ್ಯಮಗಳ ಪ್ರಗತಿಗೆ ತೊಂದರೆಯಾಗಿದೆ.ಮಲ್ಲಿಕಾರ್ಜುನ ಮಾಲೀಕ ಸುಮಿತ್ ಎಂಜಿನಿಯರಿಂಗ್ ವರ್ಕ್ಸ್
‘ರಾಜ್ಯ ಸರ್ಕಾರಕ್ಕೆ ಮನವಿ’ ‘
ತಾರಿಹಾಳ ಮತ್ತು ಗಾಮನಗಟ್ಟಿ ಸೇರಿ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ವಸಾಹತುಗಳಲ್ಲಿ ಕುಡಿಯುವ ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ನವ ಉದ್ಯಮದಲ್ಲಿ ಬಂಡವಾಳ ಹೂಡಿಕೆದಾರರಿಗೆ ವಿಶೇಷ ಅನುದಾನ ನೀಡಿ 5 ವರ್ಷದಲ್ಲಿ ₹40 ಸಾವಿರ ಕೋಟಿ ಹೂಡಿಕೆ ಆಗಬೇಕೆಂಬ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.