ಹುಬ್ಬಳ್ಳಿ: ನಗರದ ವಿವಿಧೆಡೆ ಮಂಗಳವಾರ ಮೊಹರಂ ಅನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಮರಸ್ಯದ ಸಂಕೇತ ಎಂದೇ ಕರೆಯಲಾಗುವ ಹಬ್ಬದಲ್ಲಿ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲಾ ಸಮುದಾಯದವರು ಪಾಲ್ಗೊಂಡರು. ಹಳೇ ಹುಬ್ಬಳ್ಳಿಯ ಅರವಿಂದ ನಗರ, ಗಂಜಿಪೇಟೆ, ಈಶ್ವರ ನಗರ, ಬಮ್ಮಾಪುರ ಓಣಿ ಸೇರಿದಂತೆ ವಿವಿಧೆಡೆ ಮೊಹರಂ ಸಡಗರ ಮನೆ ಮಾಡಿತ್ತು.
ಪಂಜಾಗಳನ್ನು ಕೂರಿಸಿದ್ದ ಸ್ಥಳದಲ್ಲಿ ನಡೆದ ಮೊಹರಂ ಕೊಂಡವನ್ನು ಭಕ್ತರು ಹಾಯ್ದರು. ಒಣಕೊಬ್ಬರಿ, ಖಾರೀಕು ಅರ್ಪಿಸಿ ಭಕ್ತಿ ಮೆರೆದರು. ಬೀದಿಗಳಲ್ಲಿ ಪಂಜಾಗಳ ಮೆರವಣಿಗೆ ನಡೆಯಿತು. ತರಹೇವಾರಿ ಬಣ್ಣದ ಬಟ್ಟೆ, ಅಲಂಕಾರಿಕ ಪೇಪರ್, ವರ್ಣರಂಜಿತ ರಿಬ್ಬನ್ ಹಾಗೂ ಬಿದಿರಿನ ಕಡ್ಡಿಗಳಿಂದ ಸುಂದರವಾಗಿ ಅಲಂಕರಿಸಿದ ಪಂಜಾಗಳನ್ನು ನೋಡಲು ಜನ ಮುಗಿಬಿದ್ದರು.
ಪ್ರತಿ ವರ್ಷ ಅದ್ಧೂರಿಯಾಗಿ ಮೊಹರಂ ಮೆರವಣಿಗೆ ನಡೆಯುತ್ತಿತ್ತು. ಈ ಬಾರಿ ಸತತ ಮಳೆ ಕಾರಣದಿಂದಾಗಿ ಹಬ್ಬ ಅಷ್ಟಾಗಿ ಕಳೆಗಟ್ಟಿಲ್ಲ. ಜನರೂ ಹೆಚ್ಚಾಗಿ ಹೊರಗೆ ಬಂದಿಲ್ಲ ಎಂದು ಹಳೇ ಹುಬ್ಬಳ್ಳಿಯ ಅಬ್ದುಲ ಮನ್ಸೂರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.