ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಕಟಿಗಾರ ಓಣಿಯ ಸಾಧಿಕ ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಅದೇ ಓಣಿಯಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಸಾಧಿಕ ಅವರ ಬೆನ್ನಿಗೆ ಗಾಯವಾಗಿದೆ.
ಹಳೇ ಹುಬ್ಬಳ್ಳಿಯ ಆಸೀಫ್ ಚಂಗಾಪೂರಿ, ಉಲ್ಫಾತ್ ಬಂಕಾಪೂರ, ಫರ್ದಿನ್ ಚಂಗಾಪೂರಿ ಹಾಗೂ ಇರ್ಫಾನ್ ಬಂಕಾಪೂರ ಕೊಲೆಗೆ ಯತ್ನಿಸಿದ ಆರೋಪಿಗಳು.
ಆರು ತಿಂಗಳ ಹಿಂದೆ ನಡೆದಿದ್ದ ಎತ್ತಿನ ಬಂಡಿಗೆ ಕುದುರೆ ಕಟ್ಟಿ ಓಡಿಸುವ ಸ್ಪರ್ಧೆಯಲ್ಲಿ ಪ್ರಮುಖ ಆರೋಪಿ ಆಸೀಫ್ ಮತ್ತು ಸಾಧಿಕ ಮಧ್ಯೆ ಜಗಳವಾಗಿತ್ತು. ಇದೇ ವಿಷಯಕ್ಕೆ ದ್ವೇಷ ಸಾಧಿಸುತ್ತಿದ್ದ ಆಸೀಫ್, ಮಧ್ಯಾಹ್ನ ಸಾಧಿಕ್ ಓಣಿಯಲ್ಲಿ ಹೋಗುತ್ತಿದ್ದಾಗ ಜಗಳ ತೆಗೆದು ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಆಗ ಸಾಧಿಕ್ ತಮ್ಮ ಇಮಾಮಹುಸೇನ ಕಿತ್ತೂರ, ಅಣ್ಣನನ್ನು ಬಿಡಿಸಿಕೊಳ್ಳಲು ಬಂದಿದ್ದಾರೆ. ಅವರ ಮೇಲೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಾಧಿಕ್ ತಂದೆ ಹಾಗೂ ಅಣ್ಣಂದಿರು ಸಹ ಜಗಳ ಬಿಡಿಸಲು ಬಂದಿದ್ದಾರೆ. ಆಗ ಇತರ ಆರೋಪಿಗಳಾದ ಫರ್ದಿನ್ ಮತ್ತು ಇರ್ಫಾನ್ ಇಬ್ಬರೂ ಸಾಧಿಕ್ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಕಸಬಾಪೇಟೆ ಪೊಲೀಸರು ತಿಳಿಸಿದ್ದಾರೆ.
ಜೂಜಾಟ– ನಾಲ್ವರ ಬಂಧನ
ನಗರದ ಅಕ್ಕಿಹೊಂಡದ ಕನ್ನಡ ಸರ್ಕಾರಿ ಶಾಲೆಯ ಹಿಂದೆ ಬುಧವಾರ ಇಸ್ಪೀಟ್ ಆಡುತ್ತಿದ್ದ ನಾಲ್ವರನ್ನು ಘಂಟಿಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಕೆ. ನಗರದ ಚಾಂದಸಾಬ ಅಲಿಯಾಸ್ ಚಾಂದ, ದೇಸಾಯಿ ಓಣೆಯ ನಾಗರಾಜ, ಶಿಂಪಿ ಗಲ್ಲಿಯ ವಿಜಯಕುಮಾರ ಅಲಿಯಾಸ್ ವಿಜಯ, ಈಶ್ವರನಗರದ ಹುಸೇನಸಾಬ ಅಲಿಯಾಸ್ ಹುಸೇನ ಬಂಧಿತರು. ಆರೋಪಿಗಳಿಂದ ₹1,970 ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡ ವಸೂಲಿ
ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಅವಳಿನಗರ ಪೊಲೀಸರು ಬುಧವಾರ 160 ಪ್ರಕರಣ ದಾಖಲಿಸಿ, ₹1,32,800 ದಂಡ ವಸೂಲಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.