ಹುಬ್ಬಳ್ಳಿ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಿಂಗರಾಜ ನಗರದ ಕಟ್ಟಿಮಂಗಳಾದೇವಿ ದೇವಸ್ಥಾನದ ಸಮೀಪ ಶನಿವಾರ ಬೆಳಿಗ್ಗೆ ಅಳಿಯನೇ ಮಾವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ದಾವಣಗೆರೆಯಲ್ಲಿ ದಂತವೈದ್ಯನಾಗಿರುವ ಸಂತೋಷ ಎಸ್.ಜಿ. (40) ಬೆಳಿಗ್ಗೆ 6.30ರ ಸುಮಾರಿಗೆ ತಮ್ಮ ಮಾವ, ಕಾನೂನು ಕಾಲೇಜಿನ ಪ್ರಾಚಾರ್ಯ ಶಂಕ್ರಪ್ಪ ಮೂಸಣ್ಣವರ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶಂಕ್ರಪ್ಪ ಅವರ ಪತ್ನಿ ನಾಗರತ್ನಾ ಮತ್ತು ಮಗಳುಲತಾ ಅವರು ವಾಕಿಂಗ್ಗೆ ಹೊರಡಲು ಬಾಗಿಲು ತೆರೆದಾಗ ಮನೆಯ ಮುಂದೆಯೇ ಓಡಾಡುತ್ತಿದ್ದ ಆರೋಪಿ ಸಂತೋಷ, ಮೊದಲು ಶಂಕ್ರಪ್ಪ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಇದನ್ನು ತಡೆಯಲುಬಂದ ತನ್ನ ಅತ್ತೆ ಹಾಗೂ ಹೆಂಡತಿಗೂ ಚಾಕುವಿನಿಂದ ಇರಿದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹ ಎನ್ನುವುದು ಗೊತ್ತಾಗುತ್ತಿದೆ. ತನಿಖೆ ನಡೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಲಾಬೂ ರಾಮ್ ತಿಳಿಸಿದ್ದಾರೆ.
ಬೆಚ್ಚಿ ಬಿದ್ದ ಜನ: ನವರಾತ್ರಿ ಅಂಗವಾಗಿ ಬೆಳಗಿನ ಜಾವವೇ ದೇವಸ್ಥಾನದ ಬಾಗಿಲುತೆರೆಯಲಾಗಿತ್ತು. ದೇವಸ್ಥಾನಕ್ಕೆ ಹೋಗಿ ಬರುವವರ ಸಂಖ್ಯೆಯೂ ಹೆಚ್ಚಿದ್ದಕಾರಣ ಈ ಪ್ರದೇಶ ಸದಾ ಜನನಿಬಿಡವಾಗಿತ್ತು. ಬೆಳ್ಳಂಬೆಳಿಗ್ಗೆ ಕೊಲೆ ನಡೆದ ಕಾರಣ ಲಿಂಗರಾಜ ನಗರ ಹಾಗೂ ಸುತ್ತಮುತ್ತಲಿನ ಜನ ಆತಂಕಕ್ಕೆ ಒಳಗಾಗಿದ್ದರು.
ಅಫೀಮು ಮಾರಾಟ, ನಾಲ್ವರ ಬಂಧನ:ವಲ್ಲಭಾಯಿ ನಗರದ ಹತ್ತಿರ ಅಫೀಮು ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಬಂಧಿಸಿ, ₹65 ಸಾವಿರ ಮೌಲ್ಯದ 554 ಗ್ರಾಂ ಅಫೀಮು ವಶಪಡಿಸಿಕೊಂಡಿದ್ದಾರೆ.ಹೊಸಪೇಟೆಯ ಕೌಲಪೇಟೆಯ ದೇವರಾಮ ಪಟೇಲ, ಕುಂದನ ಸುತಾರ, ಪ್ರವೀಣ ಕುಮಾರ ಲೋಹಾರ ಮತ್ತು ನರೇಶಕುಮಾರ ಶರ್ಮಾ ಬಂಧಿತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.