ಹುಬ್ಬಳ್ಳಿ: ‘ಮಹದಾಯಿ, ಕಳಸಾ–ಬಂಡೂರಿ ಹೋರಾಟಗಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸಲಿದ್ದಾರೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎನ್. ಕೋನರಡ್ಡಿ ನೀಡಿದ್ದ ಹೇಳಿಕೆಯನ್ನು ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಖಂಡಿಸಿದ್ದಾರೆ.
‘ಹೋರಾಟ ಕೋನರಡ್ಡಿ ಅವರ ಮನೆಯ ಆಸ್ತಿ ಅಲ್ಲ. ಹೋರಾಟಗಾರರು ನಿಜವಾಗಿಯೂ ಬಿಜೆಪಿ ವಿರುದ್ಧ ಇದ್ದಿದ್ದರೆ, ಹಿಂದಿನ ಚುನಾವಣೆಯಲ್ಲಿ ಕೋನರಡ್ಡಿ ಅವರು ಸ್ಪರ್ಧಿಸಿದ್ದ ನವಲಗುಂದ ಸೇರಿದಂತೆ, ಹೋರಾಟ ಇರುವ 13 ತಾಲ್ಲೂಕುಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಿರಲಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮಹದಾಯಿ, ಕಳಸಾ–ಬಂಡೂರಿ ಹೋರಾಟವನ್ನು ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸಿವೆ. ನಾನು ಇಡೀ ಕನ್ನಡ ಚಿತ್ರರಂಗವನ್ನು ಇಲ್ಲಿಗೆ ಕರೆತಂದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದೇನೆ. ಹಾಗಾಗಿ, ಯಾವುದೇ ಒಂದು ಪಕ್ಷಕ್ಕೆ ಹೋರಾಟದ ಮೇಲೆ ಹಕ್ಕು ಇಲ್ಲ. ಹಾಗಾಗಿ, ಕೋನರಡ್ಡಿ ಅವರು ಮನಬಂದಂತೆ ಹೇಳಿಕೆ ನೀಡಬಾರದು’ ಎಂದರು.
‘ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಈಶ್ವರಪ್ಪ ಅವರು, ಮಹದಾಯಿ ಉಗಮಸ್ಥಾನದಲ್ಲಿ ಸರ್ವಪಕ್ಷಗಳ ಮುಖಂಡರ ಸಭೆ ನಡೆಸಿ, ಕಾಮಗಾರಿಗೆ ಪೂಜೆ ನೆರವೇರಿಸಿದ್ದರು. ಆದರೆ, ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರಿಂದ, ವಿವಾದದ ಸ್ವರೂಪ ಪಡೆದುಕೊಂಡಿತು’ ಎಂದು ಹೇಳಿದರು.
ಗಣೇಶ ಅಮರಾವತಿ, ಆನಂದ ಬಿಜವಾಡ, ನರೇಂದ್ರ ಮೋರೆ, ಚಂದ್ರಶೇಖರ ಮಾಯನೂರ ಹಾಗೂ ವೀರಭದ್ರಯ್ಯ ಘಂಟಿಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.