
ನವಲಗುಂದ: ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿಸಿ ಹಾಗೂ ಈ ಘಟನೆಯಲ್ಲಿ ಅಮಾಯಕ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮದಲ್ಲಿನ ನೀರಿನ ಟ್ಯಾಂಕ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಭೋಗಾನೂರ ಗ್ರಾಮದ ಮಹದೇವ ಬಾಗೂರ ಆತ್ಯಹತ್ಯೆಗೆ ಯತ್ನಿಸಿದರು. ಸಮಯ ಪ್ರಜ್ಞೆ ಮೆರೆದ ನವಲಗುಂದ ಪೊಲೀಸ್ ಠಾಣಿ ಸಿಬ್ಬಂದಿ ಯುವಕನ ಮನವೊಲಿಸಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದರು.
ಹತ್ಯೆ ಖಂಡಿಸಿ ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದ ಯುವಕ ಶನಿವಾರ ಮದ್ಯಾಹ್ನ 4 ಗಂಟೆಗೆ ಏಕಾಏಕಿ ಗ್ರಾಮದಲ್ಲಿನ ನೀರಿನ ಟ್ಯಾಂಕರ್ ಏರಿ ಮಹಿಳೆಯ ಹತ್ಯೆಗೆ ಸರ್ಕಾರ ವಿಶೇಷ ತಂಡ ರಚಿಸಿ ಎಲ್ಲ ಆರೋಪಿಗಳನ್ನು ಬಂಧಿಸಿ ಮೃತಳ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು’ ಎಂಬ ಬೇಡಿಕೆಯನ್ನು ಇಟ್ಟುಕೊಂಡು ಟ್ಯಾಂಕ್ ಏರಿದ್ದರು.
ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಜನಾರ್ಧನ ಭಟ್ರಳ್ಳಿ, ಗ್ರಾಮಸ್ಥರಾದ ಅಶೋಕ ನೀಲಪ್ಪ ಮಾದಾರ, ಗಿರೀಶ ಮಾದರ, ಮಹಾರುದ್ರಪ್ಪ ಕುಂಬಾರ, ರುದ್ರಪ್ಪ ಕುಲಕರ್ಣಿ, ಶೇಕಪ್ಪ ಮಾದರ, ಭರಮಪ್ಪ ಪೂಜಾರ, ಸೇರಿದಂತೆ ಗ್ರಾಮಸ್ಥರು ಪೊಲೀಸ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಮನವೊಲಿಸಿದರು.
‘ಬಸವಣ್ಣನವರು ಅಂತರ್ಜಾಜಾತಿ ವಿವಾಹ ಮಾಡಿ ಜಾತೀಯತೆ ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿ ದ್ವೇಷ, ಅಸ್ಪೃಶ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನಸ್ಥಿತಿ ಆಳವಾಗಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಹತ್ಯೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮಹದೇವ ಬಾಗೂರ ಪ್ರಜಾವಾಣಿಗೆ ತಿಳಿಸಿದರು.
‘ಮಹದೇವ ಬಾಗೂರ ಅವರ ಮನವೊಲಿಸಿ ಸದ್ಯ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ’ ಎಂದು ಸಿಪಿಐ ರವಿಕುಮಾರ ಕಪ್ಪತ್ತನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.