ಅಣ್ಣಿಗೇರಿ: ಪ್ರತಿಯೊಬ್ಬರೂ ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾಯಕ ಮಾಡಬೇಕು ಎಂದು ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಅವರು ಸ್ಥಳೀಯ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಪದಸ್ವೀಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕನ್ನಡ ಕೇವಲ ಕಟ್ಟಡದೊಳಗೆ ಸೀಮಿತವಾಗಿರದೇ ಕಟ್ಟಡದ ಹೊರಗೆ ಬೆಳೆಯುವಂತಾಗಬೇಕು. ಅಂದಾಗ ಮಾತ್ರ ಕನ್ನಡಕ್ಕೆ ಗೌರವ ಸಿಕ್ಕಂತಾಗುತ್ತದೆ. ಕನ್ನಡ ಭಾಷೆಯಲ್ಲಿರುವ ಹಿತ ಬೇರೆ ಯಾವ ಭಾಷೆಯಲ್ಲೂ ಇಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡಕ್ಕೆ ಎಂದಿಗೂ ಮೋಸ ಮಾಡಬಾರದು ಎಂದರು.
ಕೈಮಗ್ಗ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ನೂತನ ತಾಲ್ಲೂಕು ಕೇಂದ್ರವಾದ ಅಣ್ಣಿಗೇರಿಯಲ್ಲಿ ನೂತನ ಸಾಹಿತ್ಯ ಭವನ ನಿರ್ಮಿಸಲು ಸಹಕಾರ ನೀಡುತ್ತೇನೆ. ನನ್ನ ಹಿರಿಯ ಸಹೋದರ ದಿ.ಹನಮಂತಗೌಡ ಪಾಟೀಲ ಮುನೇನಕೊಪ್ಪ ಅವರ ಹೆಸರಿನಲ್ಲಿ ದತ್ತಿಯನ್ನೂ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಪ್ರಕಾಶ ಅಂಗಡಿ ಅವರು ಕನ್ನಡದ ಧ್ವಜ ನೀಡುವ ಮೂಲಕ ನೂತನ ಅಧ್ಯಕ್ಷ ರವಿರಾಜ ವರ್ಣೇಕರ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಹೊಸಮನಿ, ಕಸಾಪ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ರವಿರಾಜ ವರ್ಣೇಕರ ಇವರಿಗೆ ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಡಾ.ಎ.ಸಿ.ವಾಲಿ ಮಹಾರಾಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಪ್ರೊ.ಎಸ್.ಎಸ್.ಹರ್ಲಾಪುರ, ಸಾಹಿತಿ ಅಮೃತೇಶ ತಂಡರ, ಮಹೇಶ ಅಂಗಡಿ, ಷಣ್ಮುಖ ಗುರಿಕಾರ, ಚಂಬಣ್ಣ ಹಾಳದೋಟರ, ಎನ್.ಎಸ್.ಮೇಲ್ಮರಿ, ಯು.ಬಿ.ಬಿಲ್ಲಹದ್ದಣ್ಣವರ, ಬಿ.ವ್ಹಿ.ಅಂಗಡಿ, ವಿ.ಎಂ.ಹಿರೇಮಠ, ಬಸವರಾಜ ಕುಬಸದ, ಪಾಂಡಪ್ಪ ದ್ಯಾವನೂರ, ಶ್ರೀಶೈಲ ಮೂಲಿಮನಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.