ADVERTISEMENT

ಬಿಜೆಪಿ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ: ಅನಿಲ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 13:11 IST
Last Updated 4 ನವೆಂಬರ್ 2020, 13:11 IST

ಹುಬ್ಬಳ್ಳಿ: ನವಲಗುಂದ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಸೈದ್ಧಾಂತಿಕವಾಗಿ ನಮ್ಮ ಹಾಗೂ ಅವರ ವಿಚಾರಗಳು ಬೇರೆ, ಬೇರೆಯಾಗಿರುವ ಕಾರಣ ಹೊಂದಾಣಿಕೆ ಪ್ರಶ್ನೆಯೇ ಬರುವುದಿಲ್ಲ ಎಂದು ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನವಲಗುಂದದಲ್ಲಿ ಸ್ಥಳೀಯ ಜೆಡಿಎಸ್‌ ನಾಯಕರು ನಮ್ಮ ಜೊತೆ ಸೇರಿ ಆಡಳಿತ ನಡೆಸಲು ಒಪ್ಪಲಿಲ್ಲ. ಜೆಡಿಎಸ್‌ ಪಕ್ಷದವರು ಒಂದೊಂದು ಕಡೆ ಒಂದೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ. ಜಾತ್ಯಾತೀತ ಪಕ್ಷಗಳ ನಿಲುವು ಒಂದೇ ಆಗಿರಬೇಕೆಂದು ಪಕ್ಷದ ಮುಖಂಡರು ಹೇಳಿದರೂ ಜಿಲ್ಲೆಯಲ್ಲಿ ಅವರ ನಡೆ ಭಿನ್ನವಾಗಿದೆ’ ಎಂದರು.

‘ನಮ್ಮ ಪಕ್ಷದ ತತ್ವ ಹಾಗೂ ಸಿದ್ಧಾಂತಕ್ಕೆ ವಿರೋಧವಾಗಿ ನಮ್ಮ ಪಕ್ಷದ ಕೆಲವು ಮುಖಂಡರೇ ನಡೆದುಕೊಂಡಿದ್ದಾರೆ. ಈ ಕುರಿತು ಇನ್ನಷ್ಟು ವಿವರ ತರಿಸಿಕೊಂಡು ಮೂರ್ನಾಲ್ಕು ದಿನಗಳಲ್ಲಿ ಕೆ.ಪಿ.ಸಿ.ಸಿಗೆ ವರದಿ ಸಲ್ಲಿಸಲಾಗುವುದು. ಕಾಂಗ್ರೆಸ್‌ಗೆ ಪ್ರತಿಷ್ಠೆಗೆ ಕೆಲವರು ಧಕ್ಕೆ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ. ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ನವಲಗುಂದದಲ್ಲಿ ಬಯಸದೇ ಇದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಮ್ಮವರೇ ಆಗಿದ್ದಾರೆ. ಅನಿರೀಕ್ಷಿತವಾಗಿ ಸಿಕ್ಕ ಈ ಅವಕಾಶ ಬಳಸಿಕೊಂಡು ಹೊಸ ಪದಾಧಿಕಾರಿಗಳು ಅಭಿವೃದ್ಧಿಗೆ ಒತ್ತು ಕೊಡುತ್ತಾರೆ. ಆದರೆ, ಬಿಜೆಪಿ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲದ ಮಾತು’ ಎಂದು ಒತ್ತಿ ಹೇಳಿದರು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕ ಶ್ರೀನಿವಾಸ ದೇಸಾಯಿ ಮತ್ತು ಮುಖಂಡ ಸಿದ್ದು ಮೈಲಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.