ಹುಬ್ಬಳ್ಳಿ: ‘ಪುಲ್ವಾಮಾ ದಾಳಿಗೆ ಸಾಕ್ಷಿ ಏನಿದೆ? ಎಂದು ಕಾಂಗ್ರೆಸ್ನವರು ಪದೇ ಪದೇ ಪ್ರಶ್ನಿಸುತ್ತಿದ್ದರು; ಅವರ ಪ್ರಶ್ನೆಗೆ ಈಗ ಪಾಕಿಸ್ತಾನವೇ ಉತ್ತರ ಕೊಟ್ಟಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು ‘ಪುಲ್ವಾಮಾ ಘಟನೆ ನಡೆದಾಗಿನಿಂದ ಜಾಗತಿಕ ಮಟ್ಟದಲ್ಲಿ ನಾವು ಪ್ರತಿಪಾದಿಸಿಕೊಂಡು ಬಂದಿದ್ದ ವಿಷಯವನ್ನೇ ಈಗ ಪಾಕಿಸ್ತಾನದ ಸಂಸದ ಬಹಿರಂಗ ಮಾಡಿದ್ದಾರೆ. ಆ ದೇಶ ಭಯೋತ್ಪಾದನೆಯನ್ನು ಪೋಷಿಸಿ, ಪ್ರೇರೇಪಿಸುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು’ ಎಂದು ಪ್ರಶ್ನಿಸಿದರು.
ಹಾಸ್ಯಾಸ್ಪದ: ’ಜಾಮೀನಿನ ಮೇಲೆ ಹೊರಗಿರುವ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ರಾಜ್ಯದ ಉಪಚುನಾವಣೆಗಳ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ನಲ್ಲಿ ಆಗಿರುವ ನಾಯಕತ್ವ ಸಮಸ್ಯೆ ರಾಜ್ಯದಲ್ಲಿಯೂ ಶುರುವಾಗಲಿದೆ’ ಎಂದರು.
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ‘ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ನಾವು ಈಗಾಗಲೇ ಗೆಲುವು ಪಡೆದಿದ್ದೇವೆ. ಅಂತರ ಎಷ್ಟು ಎನ್ನುವುದಷ್ಟೇ ಗೊತ್ತಾಗಬೇಕಿದೆ. ಸೋಲು ಖಚಿತವಾದ ಕಾರಣ ಶಿವಕುಮಾರ್ ಈಗಿನಿಂದಲೇ ಕಾರಣಗಳನ್ನು ಹುಡುಕುತ್ತಿದ್ದಾರೆ. ಡಿಕೆಶಿ ಕೂಡ ಹಣ ಖರ್ಚು ಮಾಡುವುದಿಲ್ಲವೇ? ಅವರ ಬಳಿ ಹಣವಿಲ್ಲವೇ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.