ಹುಬ್ಬಳ್ಳಿ: ನಗರದ ವಾರ್ಡ್ 9ರ ವ್ಯಾಪ್ತಿಯ ಮೇದಾರ ಓಣಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದ್ದ ನಾಲೆಯನ್ನು ಪಾಲಿಕೆ ಅಧಿಕಾರಿಗಳು ಗುರುವಾರ ಸ್ವಚ್ಛಗೊಳಿಸಿದ್ದಾರೆ.
ನಾಲೆಯಿಂದ ಸ್ಥಳೀಯರು ಅನುಭವಿಸುತ್ತಿದ್ದ ತೊಂದರೆ ಕುರಿತು ‘ಪ್ರಜಾವಾಣಿ’ಯಲ್ಲಿ ಫೆ. 20ರಂದು ‘ನಾಲೆ ಆವರಿಸಿದ ತ್ಯಾಜ್ಯ’ ವಿಶೇಷ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ, ಜೆಸಿಬಿಯಿಂದ ತ್ಯಾಜ್ಯವನ್ನು ತೆರವುಗೊಳಿಸಿದರು.
‘53ನೇ ವಾರ್ಡ್ ವ್ಯಾಪ್ತಿಯ ಮೇದಾರ ಓಣಿಯಲ್ಲಿ ಪಾಲಿಕೆ ವತಿಯಿಂದ ನಿತ್ಯವೂ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಆದರೂ, ಕೆಲವರು ರಾತ್ರಿ ಹೊತ್ತು ನಾಲೆಗೆ ಕಸ ತಂದು ಚೆಲ್ಲುತ್ತಾರೆ. ಹಾಗಾಗಿ, ಅದರಲ್ಲಿ ತ್ಯಾಜ್ಯ ತುಂಬಿಕೊಳ್ಳುತ್ತದೆ. ದಿನಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದನ್ನು ಗಮನಿಸಿ ನಾಲೆ ಸ್ವಚ್ಛಗೊಳಿಸಲಾಗಿದೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾಲೆಯ ಸುತ್ತಲೂ ಬೇಲಿ ನಿರ್ಮಿಸುವ ಮೂಲಕ, ಯಾರೂ ತ್ಯಾಜ್ಯ ಎಸೆಯದಂತೆ ಪಾಲಿಕೆಯವರು ಕ್ರಮ ಕೈಗೊಳ್ಳಬೇಕು. ತೆರೆದಂತಿರುವ ನಾಲೆಯ ಮೇಲ್ಭಾಗವನ್ನು ಮುಚ್ಚಿ, ತಳಭಾಗದಲ್ಲಿ ಕೊಳಚೆ ಹರಿಯವಂತೆ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ಪ್ರಕಾಶ ಬುರಬುರೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.