ADVERTISEMENT

ಪೊಲೀಸ್ ವಸತಿ ಶಾಲೆ ಶಿಕ್ಷಕರಿಗೆ ನೇಮಕಾತಿ ಪತ್ರ

ಬಗೆಹರಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 14:20 IST
Last Updated 13 ಜುಲೈ 2019, 14:20 IST

ಧಾರವಾಡ: ಇಲ್ಲಿರುವ ಎನ್‌.ಎ. ಮುತ್ತಣ್ಣ ಸ್ಮಾರಕ ರಾಜ್ಯ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಶಿಕ್ಷಕರು ಮರುನೇಮಕಗೊಂಡು ಪಾಠ ಆರಂಭಿಸಿದ್ದಾರೆ.

ಪ್ರತಿ ವರ್ಷ ಮರು ನೇಮಕಗೊಳ್ಳುವ ಶಿಕ್ಷಕರಿಗೆ ಈ ಬಾರಿ ಶಾಲೆ ಆರಂಭವಾದರೂ ಅನುಮತಿ ಸಿಗದಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಈಗೊಂದಲದಲ್ಲಿದ್ದ ಅಲ್ಲಿನ ಶಿಕ್ಷಕರ ಪರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸರ್ಕಾರದ ಗಮನ ಸೆಳೆದಿದ್ದರು. ಅಲ್ಲಿನ ವಿದ್ಯಾರ್ಥಿಗಳಿಗೆ ಬಲವಂತವಾಗಿ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಲಾಗುತ್ತಿದೆ. ಶಿಕ್ಷಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರೂ ಆಗಿರುವ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ‘ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸತತ ಕುಸಿತ ದಾಖಲಿಸಿದ್ದರಿಂದ ಶೈಕ್ಷಣಿಕ ಸಮಿತಿಯಿಂದ ಆಡಳಿತ ಮಂಡಳಿ ವರದಿ ಕೇಳಿತ್ತು.ಈ ವರದಿ ಜೂನ್ 28ಕ್ಕೆ ಸಲ್ಲಿಕೆಯಾಗಿದೆ. ಅದರ ಆಧಾರದ ಮೇಲೆ ಇದ್ದ ಶಿಕ್ಷಕರಿಗೆ ಮರು ನೇಮಕಾತಿ ಪತ್ರವನ್ನು ಇಲಾಖೆ ನೀಡಿದೆ. ಶಾಲೆಯಿಂದ ಯಾರನ್ನೂ ಹೊರಕ್ಕೆ ಹಾಕಿಲ್ಲ. ಆದರೆಫಲಿತಾಂಶ ಕುಸಿದಿದ್ದರಿಂದ ಕೆಲ ಪಾಲಕರು ಅವರ ಮಕ್ಕಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗಿದ್ದಾರೆ. ಅದರಲ್ಲಿ ಕೆಲವರು ಮತ್ತೆ ಶಾಲೆಗೆ ಮರಳುತ್ತಿದ್ದಾರೆ. ಹೊಸಬರೂ ಸೇರುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಶಿಕಕ್ಷರನ್ನು ಮರು ನೇಮಕ ಮಾಡಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಶಾಲೆ ಆಡಳಿತ ಮಂಡಳಿ ನಿರ್ದೇಶಕ ಜಿ.ಆರ್.ಭಟ್, ‘ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ತೊಂದರೆ, ಆಡಳಿತಾತ್ಮಕ ಸಮಸ್ಯೆಯಿಂದ ಶಾಲೆ ತೊಂದರೆಗೆ ಒಳಗಾಗಿತ್ತು. ಆದರೆ ಈಗ ಶಿಕ್ಷಕರ ನೇಮಕದಿಂದ ಎಲ್ಲಾ ಗೊಂದಗಳೂ ಬಗೆಹರಿದಿವೆ. ಶಾಲೆ ಬಿಟ್ಟುಹೋಗಿದ್ದ ವಿದ್ಯಾರ್ಥಿಗಳು ಮರಳಿ ಶಾಲೆಗೆ ಸೇರುತ್ತಿದ್ದಾರೆ. ಇತರರೂ ಶಾಲೆಗೆ ಸೇರಿ ಪೊಲೀಸರ ಮಕ್ಕಳಿಗಾಗಿಯೇ ಇರುವ ಈ ಶಾಲೆಯ ಲಾಭ ಪಡೆಯಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.