ಹುಬ್ಬಳ್ಳಿ: ಅವಳಿ ನಗರದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಶಹರ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ, ₹16.28 ಲಕ್ಷ ಮೌಲ್ಯದ 354 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಶಹರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆನಂದ ಒನಕುದ್ರೆ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
₹95 ಸಾವಿರ ವಂಚನೆ: ಭಾರತೀಯ ಸ್ಟೇಟ್ ಬ್ಯಾಂಕ್ನ ಯೊನೊ ಆ್ಯಪ್ ಸರಿಪಡಿಸುವ ಗ್ರಾಹಕ ಪ್ರತಿನಿಧಿಯ ಹೆಸರಲ್ಲಿ ಗ್ರಾಹಕರೊಬ್ಬರಿಗೆ ಕರೆ ಮಾಡಿದ ಅಪರಿತನೊಬ್ಬ ಗ್ರಾಹಕರ ಖಾತೆಯಿಂದ ₹95 ಸಾವಿರ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಅಮನ್ಕುಮಾರ್ ಎಂಬುವರು ತಮ್ಮ ಯೊನೊ ಆ್ಯಪ್ ಸರಿಪಡಿಸುವುದಕ್ಕಾಗಿ, ಅಂತರ್ಜಾಲದಲ್ಲಿ ಸಿಕ್ಕ ಸಂಖ್ಯೆಯೊಂದಕ್ಕೆ ಕರೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಕರೆ ಮಾಡಿರುವ ಅಪರಿಚಿತ ಆ್ಯಪ್ ಸರಿಪಡಿಸಿಕೊಡುವುದಾಗಿ ಹೇಳಿ, ಅವರ ನೆಟ್ ಬ್ಯಾಂಕಿಂಗ್ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ಮಾಹಿತಿ ಪಡೆದಿದ್ದಾನೆ. ಬಳಿಕ, ಟೀವ್ ವ್ಯೂವರ್ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ಲೋಡ್ ಮಾಡುವಂತೆ ಹೇಳಿದ್ದಾನೆ. ಆ್ಯಪ್ ಮೂಲಕ ತಾನು ಮೊಬೈಲ್ ಕಾರ್ಯಾಚರಣೆ ರಿಮೋಟ್ ಪಡೆದು, ಅವರ ಖಾತೆಯಿಂದ ಹಂತ ಹಂತವಾಗಿ ಹಣ ವಂಚಿಸಿದ್ದಾನೆ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬೆಟ್ಟಿಂಗ್– ಇಬ್ಬರ ಬಂಧನ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ನಗರದ ಕಾರವಾರ ರಸ್ತೆಯ ಹನುಮಂತ ದೇವರ ದೇವಸ್ಥಾನದ ಬಳಿ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ರಾಜು ಪರಾರಿಯಾಗಿದ್ದಾನೆ.
ವೀರಾಪುರ ಓಣಿಯ ರಾಜಶೇಖರ ಅಜ್ಜನವರ, ಶೆಟ್ಟರ್ ಲೇಔಟ್ನ ಮನೋಹರ ಪಾಟೀಲ ಬಂಧಿತರು. ಇವರಿಂದ ₹6,400 ನಗದು ವಶಪಡಿಸಿಕೊಳ್ಳಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.