ADVERTISEMENT

ದುರಸ್ತಿ ಕಾಣದ ರಸ್ತೆಗಳು: ಸಂಚಾರಕ್ಕೆ ಅಡ್ಡಿ

ದೂಳುಮಯ ರಸ್ತೆಗಳಲ್ಲಿಯೇ ವಾಹನಗಳ ಸಂಚಾರ: ಸಾರ್ವಜನಿಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 3:10 IST
Last Updated 20 ಡಿಸೆಂಬರ್ 2025, 3:10 IST
ಧಾರವಾಡ ನಗರದ ತೇಜಸ್ವಿನಗರದ ರೈಲು ಸೇತುವೆ ಬಳಿಯ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಧಾರವಾಡ ನಗರದ ತೇಜಸ್ವಿನಗರದ ರೈಲು ಸೇತುವೆ ಬಳಿಯ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅನೇಕ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಇದರಿಂದ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. 

ಧಾರವಾಡ ನಗರದ ತೇಜಸ್ವಿನಗರದ ರೈಲು ಸೇತುವೆ ಬಳಿಯ ಡಾಂಬರ್‌ ರಸ್ತೆ ದುರಸ್ತಿಗೊಳಿಸದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ನಗರದಿಂದ ಕಲಘಟಗಿ ಮಾರ್ಗವಾಗಿ ಅಂಕೋಲಾ, ಯಲ್ಲಾಪುರ, ಕಾರವಾರ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರೈಲು ಸೇತುವೆ ಬಳಿ ಸಂಜೆ ವೇಳೆ ವಾಹನ ಸಂಚಾರ ಅಧಿಕವಾಗಿರುತ್ತದೆ. ವಾಹನ ಸಂಚಾರದಿಂದ ಉಂಟಾಗುವ ದೂಳಿನಿಂದ ರೋಗ ಹರಡುವ ಭೀತಿಯಿದ್ದು, ಇದರಲ್ಲಿಯೇ ಅನಿವಾರ್ಯವಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಓಡಾಡುತ್ತಿದ್ದಾರೆ. 

‘ಈ ರಸ್ತೆಯಲ್ಲಿ ಭಾರಿ ವಾಹನಗಳೂ ಸಂಚರಿಸುತ್ತವೆ. ರಸ್ತೆಯಲ್ಲಿರುವ ರೈಲು ಸೇತುವೆ ನಿರ್ಮಿಸಿ ಅನೇಕ ದಿನಗಳೇ ಕಳೆದಿವೆ. ಅಪಘಾತ  ಸಂಭವಿಸುವ ಭೀತಿಯಲ್ಲಿಯೇ ವಾಹನ ಸವಾರರು ಸಂಚರಿಸುತ್ತಾರೆ. ನಿತ್ಯವು ದೂಳಿನ ವಾತಾವರಣದಲ್ಲಿಯೇ ಜೀವನ ನಡೆಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ತೇಜಸ್ವಿನಗರ ನಿವಾಸಿ ಪಕ್ಕೀರಪ್ಪ ಆರೋಪಿಸಿದರು.

ADVERTISEMENT

‘ಧಾರವಾಡ ನಗರ ಬಸ್‌ ನಿಲ್ದಾಣ ಪಕ್ಕದ ಅಕ್ಕಿಪೇಟೆ ರಸ್ತೆಯಲ್ಲಿರುವ ಚರಂಡಿ ಹಾಗೂ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಒಂದು ವರ್ಷವೇ ಕಳೆದಿದೆ. ಮಾರುಕಟ್ಟೆ ಮಧ್ಯಭಾಗದಲ್ಲಿರುವ ಕಿರಾಣಿ ಅಂಗಡಿಗಳ ದಿನಸಿ ಖರೀದಿ ಹಾಗೂ ಸಂತೆ ವ್ಯಾಪಾರಕ್ಕೆ ಬರುವ ಸಾರ್ವಜನಿಕರ ವಾಹನ ಸಂಚಾರಕ್ಕೆ ರಸ್ತೆ ಮಧ್ಯದಲ್ಲಿರುವ ತೆರೆದ ಚರಂಡಿ ಅಡ್ಡಿಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿತ್ಯ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ಮಹಮ್ಮದ್‌ ತಿಳಿಸಿದರು. 

ನಗರದ ಹಲವು ರಸ್ತೆಗಳಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತವೆ. ಒಮ್ಮೆ ನಿರ್ಮಿಸಿದ ರಸ್ತೆಯಲ್ಲಿ ಚರಂಡಿ ಸಮಸ್ಯೆ, ಕುಡಿಯುವ ನೀರಿನ ಸಂಪರ್ಕದಂತಹ ಸಮಸ್ಯೆಯಿಂದಾಗಿ ಮತ್ತೆ ಕಾಮಗಾರಿ ಆರಂಭಿಸುತ್ತಾರೆ. ಪದೇಪದೇ ಆರಂಭಿಸುವ ಕಾಮಗಾರಿಗಳಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಧಾರವಾಡ ನಗರದ ಅಕ್ಕಿಪೇಟೆ ರಸ್ತೆಯಲ್ಲಿರುವ ತೆರೆದ ಚರಂಡಿ ದುರಸ್ತಿಗೊಳಿಸದ ಕಾರಣ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು
ಧಾರವಾಡದ ತೇಜಸ್ವಿನಗರದ ರೈಲು ಸೇತುವೆ ಬಳಿಯ ರಸ್ತೆ ಹಾಗೂ ಅಕ್ಕಿಪೇಟೆ ರಸ್ತೆ ದುರಸ್ತಿ ಕಾರ್ಯ ಕುರಿತು ಸ್ಥಳೀಯ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
ವಿಜಯಕುಮಾರ ಹೆಚ್ಚುವರಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಅಕ್ಕಿಪೇಟೆ ರಸ್ತೆ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗೆ ₹14.5 ಲಕ್ಷಕ್ಕೆ ಟೆಂಡರ್‌ ನೀಡಲಾಗಿದ್ದು ಶೀರ್ಘದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ರಿಯಾಜ್‌ ಅಹ್ಮದ್‌ ಹುಬ್ಬಳ್ಳಿ ಕಾರ್ಯನಿರ್ವಾಹಕ ಎಂಜನಿಯರ್‌ ಹು–ಧಾ ಮಹಾನಗರ ಪಾಲಿಕೆ ಧಾರವಾಡ

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.