ADVERTISEMENT

ಇರುವೆ ಗೂಡಲ್ಲಿ ಹಾವಿನಂತೆ ಹೊಕ್ಕಿರುವ ಸಿದ್ದರಾಮಯ್ಯ: ಪ್ರಲ್ಹಾದ ಜೋಶಿ

ಆರೆಸ್ಸೆಸ್ ವಿರುದ್ಧದ ಟೀಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಮೇ 2022, 7:35 IST
Last Updated 29 ಮೇ 2022, 7:35 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಇರುವೆಗಳು ಕಟ್ಟಿದ ಗೂಡಿನಲ್ಲಿ ಹಾವಿನಂತೆ ಹೊಕ್ಕಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಎಷ್ಟು ಟೀಕಿಸುತ್ತೇನೋ,‌ ಇಟಲಿ ನಾಯಕರಿಗೆ ಅಷ್ಟು ಹತ್ತಿರವಾಗುತ್ತೇನೆ ಅಂದುಕೊಂಡಿದ್ದಾರೆ. ಒರಿಜಿನಲ್ ಕಾಂಗ್ರೆಸ್ ಎಂದೋ ಹೋಗಿದೆ. ಸಿದ್ದರಾಮಯ್ಯ ಕೂಡ ಒರಿಜಿನಲ್ ಕಾಂಗ್ರೆಸ್ಸಿಗರಲ್ಲ. ಈಗಿರುವ ನಕಲಿ‌ ಕಾಂಗ್ರೆಸ್ ನಲ್ಲಿ ನಕಲಿ ಲೀಡರ್ ಅವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ವಿರುದ್ಧದ ಟೀಕೆಗಳಿಗೆ ಆರೆಸ್ಸೆಸ್ ಯಾವತ್ತೂ ಉತ್ತರ ಕೊಡುವುದಿಲ್ಲ. ನಾವು ಆರೆಸ್ಸೆಸ್ ನವರಾಗಿರುವುದರಿಂದ ಉತ್ತರ ಕೊಡುತ್ತೇವೆ. ಸಿದ್ದರಾಮಯ್ಯ ಅವರು ತಮ್ಮ‌ ಹಾಗೂ ತಮ್ಮ ಪಕ್ಷದ ಅಧ್ಯಕ್ಷರ ಮೂಲದ ಬಗ್ಗೆ, ಅವರು ಎಲ್ಲಿಗೆ ಹೋಗಿ ಬರುತ್ತಾರೆ ಎಂಬುದರ ಕುರಿತು ಮಾತಾಡುವುದಿಲ್ಲ.‌ ತುಷ್ಟೀಕರಣ ಮಾಡಿ, ಇಟಲಿ ಮೂಲದ ನಾಯಕರನ್ನು ಒಲಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.

ಇಂತಹ ಮಾನಸಿಕತೆಯಿಂದ ಇಟಲಿ ಮೂಲದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಹತ್ತಿರವಾಗುವೆ ಎಂದು ಸಿದ್ದರಾಮಯ್ಯ ಅವರು ಭಾವಿಸಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಅವರು ಈ ರೀತಿ‌ ಮಾಡುತ್ತಿದ್ದಾರೆ. ಇದೀಗ ಚುನಾವಣೆ ಹತ್ತಿರ ಬರ್ತಿದೆ. ಹೇಗಾದರೂ ಮಾಡಿ ಮುಸ್ಲಿಮರ ವೋಟು ಪಡೆದು ಗೆಲ್ಲಬೇಕು. ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಕಾಣುವ ಕಾಣುತ್ತಿದ್ದಾರೆ.‌ ಒಮ್ಮೆ ಮುಖ್ಯಮಂತ್ರಿ ಆಗಿದ್ದ ಅವರನ್ನು ಜನ ಈಗಾಗಲೇ ಸೋಲಿಸಿದ್ದಾರೆ. ಹಾಗಾಗಿ, ಅವರು ತಮ್ಮ ಪುನರ್ವಸತಿ ಅಥವಾ ಗಂಜಿ‌‌ಕೇಂದ್ರ ಹುಡುಕಿಕೊಂಡು‌ ಹೊರಟಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು‌.

ADVERTISEMENT

ಹಿಂದೂಗಳಗಾಬೇಕಾದರೆ ಬಿಜೆಪಿಯವರಾಗಬೇಕಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿದ್ದರಷ್ಟೇ ಹಿಂದೂಗಳಲ್ಲ. ಆದರೆ, ಇಂದು ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರಿಂದಿಡಿದು ಎಲ್ಲರೂ ನಾನು ಹಿಂದೂ ಎಂದು‌ ಹೇಳಿಕೊಳ್ಳುವ ಅನಿವಾರ್ಯ ಸ್ಥಿತಿ ಬಂದಿರುವುದು ಬಿಜೆಪಿ ಮತ್ತು ಅದರ ಪರಿವಾರ ಸಂಘಟನೆಗಳ ಭಯದಿಂದ. ಮುಂಚೆ ಹಿಂದೂ ಎಂದು ಹೇಳಿಕೊಳ್ಳದ ಅವರು, ಅ ಧರ್ಮದ ಬಗ್ಗೆ ಅಸಡ್ಡೆ ತೋರುತ್ತಿದ್ದರು. ರಾಮ ಮಂದಿರ ಅಭಿಯಾನದ ಸಂದರ್ಭದಲ್ಲಿ ಅವರು ಏನ ಮಾತಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.

ನೆಹರು ಕಾಲದಿಂದಲೂ ಕಾಂಗ್ರೆಸ್ ತುಷ್ಟೀಕರಣ ಮಾಡಿಕೊಂಡು ಬಂದಿದೆ. ಪಿಎಫ್ಐ, ಎಸ್ ಡಿಪಿಐ ವಿಷಯದಲ್ಲೂ ಅದನ್ನೇ ಮಾಡುತ್ತಿದ್ದಾರೆ. ಹಾಗಾಗಿಯೇ, ದೇಶದ ಪರಿಸ್ಥಿತಿ ಈ ರೀತಿ ಇದೆ. ಇನ್ನಾದರೂ ಎಲ್ಲರಿಗೂ ನ್ಯಾಯವಾದುದ್ದನ್ನು‌ ಅವರು ಮಾಡಲಿ. ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಹೊಕ್ಕಿ ಆ ಪಕ್ಷದಲ್ಲಿದ್ದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಂತಹವರನ್ನು ಬದಿಗೊತ್ತಿ ಮುಖ್ಯಮಂತ್ರಿಯಾದರು. ಆದರೂ ಕಾಂಗ್ರೆಸ್ ಬಗ್ಗೆ ಅವರಿಗೆ ನಿಷ್ಠೆ ಇಲ್ಲ. ಆ ಪಕ್ಷದಲ್ಲೇ ಇವರ ವಿರುದ್ಧ ಬಹಳ ಮಂದಿ ಇದ್ದಾರೆ ಎಂದು ಕಾಲೆಳೆದರು.

ನಿರುದ್ಯೋಗ ಕುರಿತು ಸಂಸದ ವರುಣ್ ಗಾಂಧಿ ಅವರ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಂಸದ ವರುಣ್ ಗಾಂಧಿ ಅವರು ಏನೇನೊ ಹೇಳಿಕೆ ನೀಡುತ್ತಿದ್ದಾರೆ ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.