ಹುಬ್ಬಳ್ಳಿ: ಕಾನೂನುಗಳ ದುರುಪಯೋಗ ತಡೆಗಟ್ಟಲು ಕ್ರಮವಹಿಸಬೇಕು. ಇದಕ್ಕಾಗಿ ಸರ್ಕಾರ ಮಾನವ ಹಕ್ಕುಗಳ ರಕ್ಷಣೆಗಾಗಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಬುಧವಾರ ಮಾನವ ಹಕ್ಕುಗಳು ಮತ್ತು ಅನುಷ್ಠಾನದ ದೃಷ್ಟಿಕೋನ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರ ಮಟ್ಟದ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸಂಖ್ಯೆ ಶೂನ್ಯಕ್ಕೆ ತಲುಪುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ತಿಳಿಸಿದರು.
ಹಸಿವಿನಿಂದ ಯಾರು ಬಳಲದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ್ದಾಗಿದೆ. ಈ ಕೆಲಸವನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತಿದೆ ಎಂದರು.
ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಎಸ್.ಆರ್. ಬನ್ನೂರು ಮಠ ಮಾತನಾಡಿ, ಮಾನವ ಹಕ್ಕುಗಳ ಹುಟ್ಟು ಮತ್ತು ಮಾನವ ಹಕ್ಕುಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಬಗೆಗೆ ವಿವರಿಸಿದರು.
ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಈಶ್ವರ ಭಟ್ ಅವರು, ಮಾನವ ಹಕ್ಕುಗಳ ಅನುಷ್ಠಾನ ಹಾಗೂ ಮಾನವ ಹಕ್ಕುಗಳ ನ್ಯಾಯಾಲಯಗಳು ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ಹಾಗೂ ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ. ದ್ವಾರಕನಾಥ್ ಬಾಬು ಮಾತನಾಡಿ, ಮಾನವ ಹಕ್ಕುಗಳ ಅನುಷ್ಠಾನದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಉಂಟಾಗುತ್ತಿರುವ ತೊಡಕುಗಳು ಮತ್ತು ಸುಧಾರಿಸಬಹುದಾದ ಅಂಶಗಳ ಕುರಿತು ವಿವರಿಸಿದರು.
ಕಾನೂನು ಆಯೋಗದ ಸದಸ್ಯ ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್, ನ್ಯಾಯಮೂರ್ತಿ ಪಿ.ಎಸ್. ನಾರಾಯಣ,ವಿಶ್ವವಿದ್ಯಾನಿಲಯದ ಡೀನ್ ಡಾ.ಸಿ.ಎಸ್. ಪಾಟೀಲ, ಕಾನೂನು ಶಾಲೆಯ ನಿರ್ದೇಶಕ ರತ್ನಾ ಭರಮನಗೌಡ, ಕುಲಸಚಿವ ಜಿ.ಬಿ. ಪಾಟೀಲ, ಮಹ್ಮದ್ ಜಬೀರ್, ಸಹಪ್ರಾಧ್ಯಾಪಕ ಡಿ. ರಂಗಸ್ವಾಮಿ, ರಾಜೇಂದ್ರ ಕುಮಾರ್ ಹಿಟ್ಟಣಗಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.