ಧಾರವಾಡ: ‘ಮಕ್ಕಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಸಹಾಕಾರಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.
ರಂಗಭೂಮಿ ಸಂಸ್ಥೆ, ರಂಗ ಪಯಣ, ರಂಗ ಪರಿಸರ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ನಡೆದ ಅರಳು ಚಿಣ್ಣರ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಬೇಸಿಗೆ ಶಿಬಿರದಲ್ಲಿ ಮಕ್ಕಳು ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಸಹಿತ ವಿವಿಧ ಕೌಶಲಗಳನ್ನು ತಿಳಿದುಕೊಂಡಿದ್ದಾರೆ’ ಎಂದರು.
ನಾವೀಕಾ ರಂಗಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪದ್ಮಾವತಿ ದೇವಶಿಖಾಮಣಿ ಮಾತನಾಡಿ, ‘ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪೋಷಕರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ಶಿಬಿರಾರ್ಥಿಗಳಿಂದ ಪಾರ್ಥನಾ ಗೀತೆ, ಯಕ್ಷಗಾನ, ಪೌರಾಣಿಕ ನಾಟಕಗಳ ರಂಗ ರೂಪಕಗಳು, ಜನಪದ ಹಾಡು, ಸಂಗೋಳ್ಳಿ ರಾಯಣ್ಣ ಏಕಪಾತ್ರಾಭಿನಯ, ಯಲ್ಲಮ್ಮದೇವಿಯ ನೃತ್ಯ, ಯೋಗಾಸನ ಹಾಗೂ ಚಿತ್ರ ಪ್ರದರ್ಶನ ನಡೆಯಿತು. ರಂಗ ಪಯಣದ ಅಧ್ಯಕ್ಷೆ ಎನ್.ರಾಜೇಶ್ವರಿ ಸುಳ್ಯ, ಚಂದ್ರಶೇಖರ ಜಿಗಜಿನ್ನಿ, ಸುಭಾಷ ಖ್ಯಾತಣ್ಣವರ, ಕುಂಟೆ, ಸವಿತಾ, ಸ್ವರೂಪ ಹಬ್ಬು, ಗದಿಗೆಪ್ಪ ಭಾವಿ, ಶೈಲಜಾ ಬಿದರಿ, ಮಂಗಲಾ ಪಡನಾಡ, ಸುಹಾನಿ ವಿಂಗೋಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.