ADVERTISEMENT

‘ಮಾನವೀಯತೆ ಇಲ್ಲದ ಬದುಕು ವ್ಯರ್ಥ’

ಸಮಾಜ ಪರಿವರ್ತನ ಪುರಸ್ಕಾರ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 3:08 IST
Last Updated 24 ಡಿಸೆಂಬರ್ 2025, 3:08 IST
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ರೈತರು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರನ್ನು ಸನ್ಮಾನಿ‌ಸಿದರು
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ರೈತರು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರನ್ನು ಸನ್ಮಾನಿ‌ಸಿದರು   

ಧಾರವಾಡ: ಸಮಾಜದಲ್ಲಿ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವುದು ಹೆಚ್ಚುತ್ತಿದೆ. ದುರಾಸೆ ರೋಗಕ್ಕೆ ಮಿತಿ ಇಲ್ಲವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್‌) ದತ್ತಿಯಡಿ ನೀಡುವ ಮಹಾಸಂಗ್ರಾಮಿ ಎಸ್‌.ಆರ್‌.ಹಿರೇಮಠ ಸಮಾಜ ಪರಿವರ್ತನ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ‘ತೃಪ್ತಿ ಇದ್ದರೆ ದುರಾಸೆ ಇರುವು‌ದಿಲ್ಲ. ನ್ಯಾಯ ಮಾರ್ಗದಲ್ಲಿ ಶ್ರೀಮಂತರಾಗುವುದರಲ್ಲಿ ತಪ್ಪಿಲ್ಲ. ಬೇರೆಯವರದ್ದನ್ನು ಕಬಳಿಸಬಾರದು ಎಂದು ಹೇಳಿದರು.

‘ಇಂದು ಶಾಲೆಗಳಲ್ಲಿ ಮಕ್ಕಳಿಗೆ ನೀತಿ ಪಾಠ‌ವೇ ಇಲ್ಲ. ಮಕ್ಕಳಿಗೆ ಮೌಲ್ಯಗಳನ್ನು ತಿಳಿಸಬೇಕು ಮಾನವೀಯತೆ ಇಲ್ಲದಿದ್ದರೆ ಬದುಕು ವ್ಯರ್ಥ’ ಎಂದು ಹೇಳಿದರು.

ADVERTISEMENT

ಕರ್ನಾಟಕ ರಾಜ್ಯ ಕಾನೂನು ವಿ.ವಿ ಕುಲಪತಿ ಪ್ರೊ.ಸಿ.ಬಸವರಾಜ ಮಾತನಾಡಿ, ಜಾತಿ ವಿಷಯದಲ್ಲಿ ಒಡೆಯುತ್ತಿರುವ ಸಮಾಜವನ್ನು ಮತ್ತೆ ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ. ಸಮಾಜದಲ್ಲಿ ಪರಿವರ್ತನೆ ತರಬೇಕು’ ಎಂದು ಹೇಳಿದರು.

‘ಅಸ್ಪೃಶ್ಯತೆ, ಮರ್ಯಾದೆಗೇಡು ಹತ್ಯೆ ಮೊದಲಾದವು ಜವಂತವಾಗಿವೆ. ಮಾನವ ಹಕ್ಕುಗಳ ಉಲ್ಲಂಘನೆ ಮಹಿಳೆಯರು, ಮಕ್ಕಳು, ದಲಿತರ ಮೇಲೆ ದೌರ್ಜನ್ಯಗಳು, ನಡೆಯುತ್ತಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾವಂತರು ಅಡಳಿತದ ಚುಕ್ಕಾಣಿ ಹಿಡಿಯಬೇಕು. ನೇರ ನಡೆ, ನುಡಿ, ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಇದೆ ಎಂದು ಹೇಳಿದರು.

ಸಮಾಜ ಪರಿವರ್ತನ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ. ಸಂವಿಧಾನಾತ್ಮಕ ಸಂಸ್ಥೆಗಳ ರಕ್ಷಣೆ ಎಲ್ಲರ ಹೊಣೆ. ದೇಶದ ಸಮಗ್ರತೆಯನ್ನು ಕಾಪಾಡಲು ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಹೇಳಿದರು.

‘ಅಹಿಂಸೆ, ಸತ್ಯ ಮತ್ತು ನ್ಯಾಯ ಬದುಕಿನ ದಾರಿ ದೀಪಗಳಾಗಬೇಕು. ಸಾಮಾಜಿಕ ಆರ್ಥಿಕ ನ್ಯಾಯಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ ಭೂಷಣ್‌ ಅವರು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತ ಮಾಡಿಸಿದರು. ಗಣಿಗಾರಿಕೆ ಮಾಡಿ ಆ ಪ್ರದೇಶ ಹಾಳುಗೆಡವಿದವರು ₹ 32 ಸಾವಿರ ಕೋಟಿ ಹಣ ಕಟ್ಟುವಂತೆ ಮಾಡಿದರು. ಗಣಿಗಾರಿಕೆಯಿಂದ ಹಾಳಾದ ಪ್ರದೇಶದ ಪುನಶ್ಚೇತನ ಮತ್ತು ಸಂತ್ರಸ್ತರ ಬದುಕು ಹಸನುಗೊಳಿಸಲು ಎಲ್ಲರೂ ಶ್ರಮಿಸಬೇಕು’ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.