ADVERTISEMENT

ಕ್ರೈಸ್ತ ಸಮುದಾಯಕ್ಕೆ ಮತಾಂತರ ಆರೋಪ: ಆರೋಪಿ‌ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 10:26 IST
Last Updated 17 ಅಕ್ಟೋಬರ್ 2021, 10:26 IST
ಹುಬ್ಬಳ್ಳಿ ನವನಗರ ಎಪಿಎಂಸಿ ಪೊಲೀಸ್ ಠಾಣೆ ಎದುರು ವಿಎಚ್ ಪಿ, ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ ನವನಗರ ಎಪಿಎಂಸಿ ಪೊಲೀಸ್ ಠಾಣೆ ಎದುರು ವಿಎಚ್ ಪಿ, ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಹುಬ್ಬಳ್ಳಿ: ಇಲ್ಲಿನ ಭೈರಿದೇವರಕೊಪ್ಪದ ಸರ್ವಧರ್ಮ ಪ್ರಾರ್ಥನಾ ಮಂದಿರದಲ್ಲಿ ಮತಾಂತರಕ್ಕೆ ಪ್ರಚೋದನೆ‌ ಮಾಡುತ್ತಿದ್ದ ಸೋಮಲಿಂಗ ಅವರಾದಿ ಎಂಬಾತನನ್ನು‌ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ನವನಗರದ ಪೊಲೀಸ್ ಠಾಣೆ ಮುಂದೆ ಭಾನುವಾರ ಪ್ರತಿಭಟನೆ ‌ನಡೆಸಿದರು.

ಪ್ರಾರ್ಥನೆ ಹೆಸರಲ್ಲಿ ಹಿಂದೂಗಳನ್ನ ತಂದು ಮತಾಂತರ ಮಾಡಲಾಗುತ್ತಿದೆ ಎಂದು ಸಂಘಟನೆಯವರು ಆರೋಪಿಸಿದರು. ಸೋಮಲಿಂಗ ಕ್ರೈಸ್ತ ಸಮುದಾಯದ ಪಾಸ್ಟರ್ ಆಗಿ ಬದಲಾಗಿದ್ದಾನೆ. ಇದನ್ನು ವಿರೋಧಿಸಿ ಪ್ರಾರ್ಥನಾ ಮಂದಿರದ ಹೊರಗೆ ಸಂಘಟನೆಯವರು ಭಜನೆ ಮಾಡಿದರು.

ಈ ವೇಳೆ ಕ್ರಿಶ್ಚಿಯನ್ನರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕೆ ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂದಿದ್ದಾರೆ.

ADVERTISEMENT

ಮತಾಂತರಕ್ಕೆ ಪ್ರಚೋದನೆ ನೀಡಿದ ಸೋಮು ಅವರಾದಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸ್ ಠಾಣೆ ಆವರಣಕ್ಕೆ ಕರೆದುಕೊಂಡು ‌ಬಂದರೂ ಪೊಲೀಸರು‌ ಬಂಧಿಸಿಲ್ಲ. ತಕ್ಷಣವೇ ಬಂಧಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟು ಸಂಘಟನೆಯವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ‌ಮುಂದುವರಿಸಿದ್ದಾರೆ.

ಪೊಲೀಸ್‌ ಠಾಣೆಯ ಸಮೀಪದಲ್ಲಿಯೇ ಆರೋಪಿ ಸೋಮು ಅವರ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಅವರಿಂದ ತಪ್ಪಿಸಿಕೊಂಡ ಸೋಮು ಅವರು ಅಂಬುಲೆನ್ಸ್‌ ಹತ್ತಿ ಆಸ್ಪತ್ರೆಗೆ ತೆರಳಿದರು.

ಹಲ್ಲೆ ಮಾಡುತ್ತಿದ್ದವರಿಂದ ತಪ್ಪಿಸಿಕೊಂಡು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ತೆರಳಿದ ಸೋಮಲಿಂಗ ಅವರಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.