ADVERTISEMENT

ಕಾರ್ಮಿಕರನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 14:03 IST
Last Updated 10 ಜುಲೈ 2019, 14:03 IST
ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತಭವನದ ಎದುರು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಬುಧವಾರ ಧರಣಿ ನಡೆಸಿದರು
ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತಭವನದ ಎದುರು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಬುಧವಾರ ಧರಣಿ ನಡೆಸಿದರು   

ಧಾರವಾಡ:ಕಳೆದ 20 ವರ್ಷಗಳಿಂದ ಸಫಾಯಿ ಕರ್ಮಚಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕಾರ್ಮಿಕರನ್ನು ಮರಳಿ ಕೆಲಸಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಒತ್ತಾಯಿಸಿತು.

ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾನಿಕ ಎಂಜಿನಿಯರ್‌ ಅವರ ಕಚೇರಿ ಎದುರು ಬುಧವಾರ ಧರಣಿ ನಡೆಸಿದ ಸ್ವಚ್ಛತಾ ಕಾರ್ಮಿಕರು, ಶಿವಕ್ಕ ರೇವಯ್ಯನವರ, ಬಾಲವ್ವ ಅನಿಗೋಳ, ಬಸಮ್ಮ ಮಾದರ, ಬಸಂತಿ ನಂದ್ಯಾಳ ಅವರನ್ನು ಕೆಲಸದಿಂದ ಕೈಬಿಡಲಾಗಿದೆ. ಅವರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, ‘ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸ್ಥಾನಿಕ ಎಂಜಿನಿಯರ್ ಅವರನ್ನು ಕೇಳಿದರೆ, ಗುತ್ತಿಗೆದಾರರ ಕಾಲಿಗೆ ಬೀಳುವಂತೆ ಹೇಳಿ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದ್ದಾರೆ. ಕಾಯ್ದೆ ಪ್ರಕಾರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಧಿಕಾರ ಎಂಜಿನಿಯರ್‌ಗೆ ಇರುತ್ತದೆ. ಹಾಗೆಯೇ 10 ವರ್ಷದಿಂದ ಕೆಲಸ ಮಾಡಿರುವ ನೌಕರರನ್ನು ಕೆಲಸದಿಂದ ತೆಗೆದುಹಾಕಬಾರದು ಎಂದು ಸುಪ್ರಿಂಕೋರ್ಟ್ ಆದೇಶವೇ ಇದೆ. ಆದರೆ ಇಲ್ಲಿ ಆ ಆದೇಶ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಆದರೆ ಇಲ್ಲಿ ನೈಜ ಕಾರ್ಮಿಕರನ್ನು ಕೈಬಿಟ್ಟು, ಖಾಸಗಿಯವರ ಹೊಲದಲ್ಲಿ ಕೆಲಸ ಮಾಡುವವರನ್ನು ನೇಮಿಸಿಕೊಳ್ಳಲಾಗಿದೆ. ಈ ಕೂಡಲೇ ಕೈಬಿಟ್ಟಿರುವ ನಾಲ್ವರನ್ನು ನೇಮಿಸಿಕೊಳ್ಳಬೇಕು’ ಎಂದು ಗುಂಟ್ರಾಳ ಆಗ್ರಹಿಸಿದರು.

ಚಿನ್ನಕುಲಾಯಪ್ಪ ಸಗಬಾಲ್, ಗಂಗಯ್ಯ ಸಾಕೇನವರ, ಪುಲ್ಲಣ್ಣ ನಾರಕ್ಕನವರ, ಚಿಂತಮ್ಮ ಚಿಂಚಗೋಳ, ಚಿನ್ನಪ್ರಭುದಾಸ ಗುಡಿಸಿ, ಚಿಂತಮ್ಮ ಮಾದರ, ಮಲ್ಲೇಶ ಚಿಂಚಗೋಳ, ರಾಜು ಸಾಕೆ, ಪೆದ್ದಯ್ಯ ನಲ್ಲಗಾಲ, ಓಬಳೇಶ ಕೋಂಡುಪಾಕು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.