ADVERTISEMENT

ಆನಂದ ಬಿಡುಗಡೆಗೆ ಆಗ್ರಹಿಸಿ 14ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 10:12 IST
Last Updated 13 ಆಗಸ್ಟ್ 2020, 10:12 IST
ಆನಂದ ತೇಲುಂಬ್
ಆನಂದ ತೇಲುಂಬ್   

ಹುಬ್ಬಳ್ಳಿ: ಚಿಂತಕ ಆನಂದ ತೇಲ್ತುಂಬ್ಡೆ ಅವರನ್ನು ಬಿಡುಗಡೆ ಮಾಡಬೇಕು, ಹಿರಿಯ ವಕೀಲ ಪ್ರಶಾಂತ ಭೂಷಣ್‌ ಮೇಲಿರುವ ಕ್ರಿಮಿನಲ್‌ ನಿಂದನೆ ಪ್ರಕರಣ ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ಸಿಟಿಜನ್‌ ಫಾರ್‌ ಡೆಮಾಕ್ರಸಿ ಸಂಘಟನೆ ಆ. 14ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ.

ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ’ಮೊದಲು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಾಂದೋಲನಗಳ ಮಹಾಮೈತ್ರಿ, ಜನಸಂಗ್ರಾಮ ಪರಿಷತ್‌ ಮತ್ತು ಸಮಾನ ಮನಸ್ಕ ಸಂಘಟನೆಗಳು ಆ. 15ರ ವರೆಗೆ ಜನಜಾಗೃತಿ ಮೂಡಿಸಲು ಉಪವಾಸ ಸತ್ಯಾಗ್ರಹ, ವೆಬಿನಾರ್‌ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ’ ಎಂದರು.

’ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಾಹಿತಿಗಳು ಹಾಗೂ ಹೋರಾಟಗಾರರನ್ನು ಬಂಧಿಸಿದ್ದು ಪ್ರಜ್ಞಾವಂತ ನಾಗರಿಕರಿಗೆ ತುಂಬಾ ನೋವುಂಟು ಮಾಡಿದೆ. ಆದ್ದರಿಂದ ಪ್ರತಿಭಟನೆಯಲ್ಲಿ ಯುವಜನತೆ ಕೈ ಜೋಡಿಸಬೇಕು’ ಎಂದು ಕರೆ ನೀಡಿದರು.

ADVERTISEMENT

ಜನತಂತ್ರ ಸಮಾಜದ ಕಾರ್ಯದರ್ಶಿ ವೆಂಕನಗೌಡ ಪಾಟೀಲ ಮಾತನಾಡಿ ‘ಆಜಾದಿಯಿಂದ ಸ್ವರಾಜ್ ಚಳವಳಿ ಅಂಗವಾಗಿ ವೆಬಿನಾರ್‌ಗಳು ನಡೆಯುತ್ತಿವೆ. ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಕಚೇರಿಯಲ್ಲಿ 15ರ ತನಕ ಸಂಜೆ 5 ಗಂಟೆಗೆ ನಿತ್ಯ ಕಾರ್ಯಕ್ರಮ ಜರುಗಲಿವೆ. ನಿತ್ಯ ಒಂದೊಂದು ವಿಷಯದ ಬಗ್ಗೆ ಚರ್ಚೆಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.